ಕುಖ್ಯಾತ ಕಳ್ಳರ ಬಂಧನ: 3.61 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

Public TV
1 Min Read

ರಾಯಚೂರು: ಜಿಲ್ಲೆಯ ಹೆಗ್ಗಸನಹಳ್ಳಿ, ಶಕ್ತಿನಗರ, ಕಲ್ಮಲ, ದೇವಸೂಗುರಿ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಕುಖ್ಯಾತ ಮನೆಗಳ್ಳರನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, 3,61,500 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಯಚೂರು ಹಾಗೂ ಶಕ್ತಿ ನಗರ ನಿವಾಸಿಗಳಾದ ಭೂಪತಿ ಬಾಲಕೃಷ್ಣ, ದಿನೇಶ್, ನವಾಜ್, ಮಂಜುನಾಥ್ ಬಂಧಿತ ಆರೋಪಿಗಳು. ಇವರ ವಿರುದ್ಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಾಲ್ವರ ಈ ತಂಡದಲ್ಲಿ ಇಬ್ಬರು ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗಿ ಅಲ್ಲಿ ಯಾವ ಮನೆ ಬೀಗ ಹಾಕಿದೆ. ಎಷ್ಟು ಜನರಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನಂತರ ಉಳಿದ ಇಬ್ಬರು ರಾತ್ರಿ ಇಲ್ಲವೇ ಹಗಲಿನಲ್ಲಿ ಕಳ್ಳತನ ಮಾಡುತ್ತಿದ್ದರು.

ಬಂಧಿತರಿಂದ 2,71,500 ರೂ. ಮೌಲ್ಯದ ಚಿನ್ನಾಭರಣ, 15 ಸಾವಿರ ರೂ. ಮೌಲ್ಯದ 310 ಗ್ರಾಂ ಬೆಳ್ಳಿ, 75 ಸಾವಿರ ನಗದು ಸೇರಿದಂತೆ ಒಟ್ಟು 3,61,500 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *