ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

Public TV
1 Min Read

– 40 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ಬೆಂಗಳೂರು: ಕಳ್ಳರ ಗುಂಪೊಂದು ಮೋರಿಯ ಒಳಗಿನಿಂದ ಚಿನ್ನದ ಅಂಗಡಿಗೆ ಕನ್ನ ಹಾಕಿ ಚಿನ್ನಾಭರಣವನ್ನು ಕದ್ದಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂನಲ್ಲಿ ನಡೆದಿದೆ.

ದೇವಸಂದ್ರ ಮುಖ್ಯರಸ್ತೆಯ ಬಾಲಾಜಿ ಜ್ಯುವೆಲ್ಲರಿ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದು, ಗುರುವಾರ ಬೆಳಗ್ಗೆ ಮಾಲೀಕ ಮೋಹನ್ ಲಾಲ್ ಅವರು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ.

ಮೋರಿಯಿಂದ 6 ಅಡಿ ಉದ್ದದ ಸುರಂಗವನ್ನು ಕೊರೆದು ಮಧ್ಯಭಾಗವನ್ನು ಪ್ರವೇಶಿಸಿ ಚಿನ್ನ ಮತ್ತು ಬೆಳ್ಳಿಯನ್ನು ಕದ್ದಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಮೇಲೆ ಮಾಲೀಕ ಕೆಆರ್‍ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಳ್ಳಿ ಸೇರಿದಂತೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಬೆಳ್ಳಿ ಪತ್ತೆ: ಪೊಲೀಸರು ಸ್ಥಳಕ್ಕೆ ಆಗಮಿಸಿ ಸುರಂಗದ ಒಳಗಡೆ ನುಗ್ಗಿ ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 40 ಕೆಜಿಯಷ್ಟು ಬೆಳ್ಳಿಯನ್ನು ಅಲ್ಲೆ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಅಂದಾಜು ಒಟ್ಟು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳ್ಳತನವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.

ಮೋರಿ ಮೇಲೆ ಕಲ್ಲಿನ ಸ್ಲ್ಯಾಬ್ ಹಾಕಲಾಗಿತ್ತು. ಸ್ಲ್ಯಾಬ್ ಇದ್ದ ಕಾರಣ ಸುರಂಗ ಕೊರೆದಿದ್ದ ವಿಚಾರ ಪತ್ತೆಯಾಗಿರಲಿಲ್ಲ. ಡಿಸಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.

ಪೊಲೀಸರು ಈಗ ಜ್ಯುವೆಲ್ಲರಿ ಒಳಗಡೆ ಇದ್ದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಷ್ಟು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಎರಡು ಅಥವಾ ಮೂರು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

 

Share This Article
Leave a Comment

Leave a Reply

Your email address will not be published. Required fields are marked *