ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

Public TV
1 Min Read

ಮಂಡ್ಯ: ಪುರಾತತ್ವ ಇಲಾಖೆಗೆ ಸೇರಿದ ಶ್ರೀರಾಮನ ದೇಗುಲದಲ್ಲಿ ವ್ಯಕ್ತಿಯೊಬ್ಬ ಹುಂಡಿ ಒಡೆದು ಹಣ ದೋಚಿದ್ದು ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸುಮಾರು 650 ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿದೆ. ಈ ದೇವಾಲಯದ ಒಳಗೆ ಜನವರಿ 24 ರಂದು ಮಧ್ಯರಾತ್ರಿ ವೇಳೆಗೆ ಆಗಮಿಸುವ ಆಗಂತುಕ ವ್ಯಕ್ತಿಯೊಬ್ಬ ದೇವರ ಗಂಟೆಯಿಂದಲೇ ಹುಂಡಿ ಬೀಗ ಹೊಡೆದು ಹಣ ದೋಚಿ ಪರಾರಿಯಾಗಿದ್ದಾನೆ.

ಚಡ್ಡಿ ಹಾಕಿಕೊಂಡು, ಚಳಿಯಾಗದಂತೆ ಮೈತುಂಬ ರಗ್ಗೊಂದನ್ನು ಸುತ್ತಿಕೊಂಡು ಬಂದಿರುವ ವ್ಯಕ್ತಿ, ದೇವರ ಮೇಲಿನ ಭಯ ಭಕ್ತಿ ಇಲ್ಲದೇ ಹುಂಡಿ ಹೊಡೆದು ಹಣ ದೋಚಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರೋ ದೇವಾಲಯದ ಬಗ್ಗೆ ತಿಳಿದಿರುವ ಸುತ್ತಮುತ್ತಲ ಗ್ರಾಮದ ವ್ಯಕ್ತಿಯೇ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ದೇವಾಲಯದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿದ್ದು, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *