ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಹಾಡಹಗಲೇ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಮಾದನಾಯಕನಹಳ್ಳಿಯ ರಾಜೇಶ್ವರಿ ಬಡಾವಣೆಯ ನಿವಾಸಿ ಕಾಳಮ್ಮ ಚಿನ್ನ ಕಳೆದುಕೊಂಡ ವೃದ್ಧೆ. ಕಾಳಮ್ಮ ಅವರ ಕೊರಳಲ್ಲಿ ಇದ್ದ 28 ಗ್ರಾಂ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿಯೇ ಕಿತ್ತುಕೊಂಡ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಆಗಿದ್ದೇನು?:
ವಿಳಾಸ ಕೇಳಿದ ಹಿನ್ನೆಲೆಯಲ್ಲಿ ವೃದ್ಧೆ ಕಾಳಮ್ಮ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಮಹಿಳೆಯರು ಕಾಳಮ್ಮ ಅವರನ್ನು ಮಾತನಾಡಿಸಿ, ವಿಳಾಸ ಕೇಳಿದ್ದಾರೆ. ಮೂವರು ಇರುವ ಜಾಗಕ್ಕೆ ಬಂದ ವ್ಯಕ್ತಿಯೊಬ್ಬ, ನನ್ನ ಪರ್ಸ್ ಇಲ್ಲಿ ಎಲ್ಲಿಯೋ ಬಿದ್ದಿದೆ. ಅದನ್ನು ನೀವು ತೆಗೆದುಕೊಂಡಿದ್ದೀರಾ ಕೊಡಿ ಎಂದು ಕೇಳಿದ್ದಾನೆ. ತಕ್ಷಣವೇ ಜಗಳಕ್ಕೆ ಇಳಿದಂತೆ ವರ್ತಿಸಿ ಕಾಳಮ್ಮ ಅವರ ಬಾಯಿ ಮುಚ್ಚಿ, ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆದರೆ ಅವರ ಹಿಡಿಯಲು, ಜನರನ್ನು ಕೂಗಿ ಕರೆಯಲು ಕಾಳಮ್ಮ ಅವರಿಗೆ ಆಗಿಲ್ಲ.
ಚಿನ್ನ ಹಿಡಿದು ಓಡಿದ ಕಳ್ಳರು ದೂರದಲ್ಲಿ ನಿಲ್ಲಿಸಿದ್ದ ಕಾರು ಹತ್ತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv