ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೊಲೀಸರ ಕಣ್ಗಾವಲಿನಲ್ಲಿಯೇ ಮನೆ ದೋಚುತ್ತಿದ್ದ ನಟೋರಿಯಸ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಆರ್ಮುಗಂ ಅಲಿಯಾಸ್ ಕರಿಯಾ ಎನ್ನಲಾಗಿದೆ. ಈತನಿಗೆ ಇಬ್ಬರು ಪೇದೆಗಳು ಕುಮ್ಮಕ್ಕು ನೀಡುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಖತರ್ನಾಕ್ ಕಳ್ಳ ಆಮುರ್ಗಂ ಮೈಕೋ ಲೇ ಔಟ್ ನಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದನು. ಈ ವೇಳೆ ಅದೇ ಪ್ರದೇಶದ ಪೇದೆ ಹಸೀಮ್ ಸಾಬ್ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಖದೀಮ ಕರಿಯಾ, ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೇದೆಗಳಾದ ಮಧು, ತಿಪ್ಪೇಸ್ವಾಮಿಯಿಂದ ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದಾಗಿ ಬಾಯ್ಬಿಟ್ಟಿದ್ದಾನೆ. ಕದ್ದ ಮಾಲಿನಲ್ಲಿ ಇಬ್ಬರಿಗೂ ಅರ್ಧ ಪಾಲು ನೀಡುವಂತೆ ತಾಕೀತು ಮಾಡುತ್ತಿದ್ದರು. ಹೀಗಾಗಿ ಅವರ ಮಾತಿನಂತೆ ಕಳ್ಳತನ ಮಾಡಿ ಅವರಿಗೂ ಪಾಲು ನೀಡುತ್ತಿರುವುದಾಗಿ ಆರ್ಮುಗಂ ಹೇಳಿದ್ದಾನೆ.
ಆರ್ಮುಗಂ ಹೆಸರು ಪ್ರಸ್ತಾಪಿಸಿದ ಬಳಿಕ ಪೇದೆಗಳಿಬ್ಬರೂ ಎಸ್ಕೇಪ್ ಆಗಿದ್ದಾರೆ. ಇದೀಗ ಅವರಿಬ್ಬರ ಪತ್ತೆಗೆ ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ಅವರಿಂದ ವಿಶೇಷ ತಂಡ ರಚಿಸಲಾಗಿದೆ.
ಘಟನೆ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.