ಬುದ್ಧಿಮಾಂದ್ಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಗರ್ಭಿಣಿಯಾದ್ಮೇಲೆ ಹೆರಿಗೆ ಮಾಡಿಸಿ ಮಕ್ಕಳ ಮಾರಾಟ

Public TV
2 Min Read

ಬೆಳಗಾವಿ: ಬುದ್ಧಿಮಾಂದ್ಯ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಬಳಸಿಕೊಂಡು ಬಾಡಿಗೆ ಗರ್ಭದ ದಂಧೆ ನಡೆಸುತ್ತಿರೋ ಸ್ಫೋಟಕ ತನಿಖಾ ವರದಿಯನ್ನು ಪಬ್ಲಿಕ್ ಟಿವಿ ಬಯಲಿಗೆಳಿದಿದೆ. ಮಾನಸಿಕ ಅಸ್ವಸ್ಥ, ಬುದ್ಧಿಮಾಂದ್ಯ ಹದಿಹರೆಯದ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿ ನಂತರ ಜನಿಸಿದ ಹಸುಗೂಸುಗಳನ್ನು ಇವರೇ ಪಡೆದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಾರೆ.

ಇದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಸ್ಫೋಟಕ ಸುದ್ದಿ. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ತಾಲೂಕಿನ ಹಲವಾರು ಕಡೆ ಇಂಥ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮಾನಸಿಕ ಅಸ್ವಸ್ಥರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಅತ್ಯಾಚಾರ ಮಾಡಿದ ಮೇಲೆ ಅಂಥ ಮಹಿಳೆ, ಯುವತಿಯರ ಮೇಲೆ ನಿಗಾ ಇಡುತ್ತಾರೆ. ಅವರು ಮನೆಯಲ್ಲಿ ಹೇಳಲು ಬುದ್ಧಿಯಿಲ್ಲದ ಕಾರಣ ಹಾಗೂ ಹೊರಜಗತ್ತಿನ ಅರಿವಿಲ್ಲದ್ದರಿಂದ ಮಕ್ಕಳಿಗೆ ಜನ್ಮ ನೀಡುತ್ತಾರೆ.

ಮಾನಸಿಕ ಅಸ್ವಸ್ಥರು ಮಗುವಿಗೆ ಜನ್ಮ ನೀಡಿದಾಗ ಪಾಲಕರು ಮಗುವನ್ನು ಏನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ ಇತ್ತ ಕಾಯುತ್ತ ಕುಳಿತ ಖದೀಮರು ಅಲ್ಲಿಗೆ ಸಹಾಯ ಮಾಡುವ ನೆಪದಲ್ಲಿ ಎಂಟ್ರಿ ಕೊಡುತ್ತಾರೆ. ತಾವೇ ಆಂಬುಲೆನ್ಸ್ ಗೆ ಫೋನ್ ಮಾಡಿ ತಾಯಿ-ಮಗುವನ್ನು ಚಿಕಿತ್ಸೆ ಕೊಡಿಸುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡ್ತಾರೆ. ಈ ಮಗುವನ್ನು ನೀವು ತಗೆದುಕೊಂಡು ಹೋದರೆ ನಿಮ್ಮ ಹೆಸರು ಹಾಳಾಗುತ್ತದೆ ಎಂದು ಪಾಲಕರಿಗೆ ಹೆದರಿಸಿ, ಮಗುವನ್ನು ಇಲ್ಲಿಯೇ ಬಿಟ್ಟು ತಾಯಿಯನ್ನು ಮಾತ್ರ ಕರೆದುಕೊಂಡು ಹೋಗುವಂತೆ ಪುಸಲಾಯಿಸಿ ಅದರಲ್ಲಿ ಸಕ್ಸಸ್ ಆಗುತ್ತಾರೆ. ಮೊದಲ್ಲೇ ಮಕ್ಕಳನ್ನು ಪಡೆಯುವ ಗಿರಾಕಿಗಳನ್ನು ಗುರುತಿಸಿದ ಖದೀಮರು ಲಕ್ಷಾಂತರ ರೂಪಾಯಿಗೆ ಇಂಥ ಹಸುಗೂಸುಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ.

ಪ್ರತಿಯೊಬ್ಬ ಬುದ್ಧಿಮಾಂದ್ಯ ಯುವತಿಯಿಂದ ನಾಲ್ಕೈದು ಬಾರಿ ಡೆಲಿವರಿ ಮಾಡಿಸಿದ ಭೂಪರು ಯಾವುದೇ ಕಾನೂನಿನ ಅಡೆತಡೆಯಿಲ್ಲದೆ ತಾವೇ ಬುದ್ಧಿಮಾಂದ್ಯ ಯುವತಿಯರ ಕುಟುಂಬಗಳಿಗೆ ಸಹಾಯ ಮಾಡಿದ ರೀತಿ ಪೋಸ್ ನೀಡುತ್ತಿದ್ದಾರೆ. ಒರ್ವ ಬುದ್ಧಿಮಾಂದ್ಯ ಯುವತಿಗೆ ನಾಲ್ಕು ಬಾರಿ ಡೆಲಿವರಿ ಮಾಡಿಸಿದ್ದಾರೆ.

ನಾಗರಿಕ ಸಮಾಜ ತಲೆ ತಗ್ಗಿಸುವ ಈ ಹೇಯ ಕೃತ್ಯ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಮಂತುರ್ಗಾ, ಮಾನ, ಸಡಾ ಗ್ರಾಮಗಳಲ್ಲಿ ಕಂಡುಬಂದಿದೆ. ಇಂಥ ಅನೇಕ ಪ್ರಕರಣಗಳು ಬೆಳಗಾವಿ ಜಿಲ್ಲೆಯ ಗಡಿ ತಾಲೂಕುಗಳಾದ ಚಿಕ್ಕೋಡಿ, ಬೆಳಗಾವಿ ಗ್ರಾಮೀಣ, ಅಥಣಿ, ನಿಪ್ಪಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಗುಮಾನಿ ಇದೆ. ಈ ಖದೀಮರ ಜಾಲದ ಹಿಂದೆ ಕೆಲ ಇಲಾಖೆ ಹಾಗೂ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ ಎಂಬ ಆರೋಪವೂ ಕೇಳಿಬಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *