-ತಮ್ಮ ಮೇಲಿನ ಆರೋಪ ತಳ್ಳಿಹಾಕಲು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದ ಕೇಂದ್ರ ಸಚಿವ
ಧಾರವಾಡ: ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೊದಲ ನಿಧನದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? ಈ ಪ್ರಕರಣದಲ್ಲಿ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಆರ್ಸಿಬಿ (RCB) ವಿಜಯೋತ್ಸವಕ್ಕೂ ಮೊದಲೇ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayanand) ಅವರು ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗುವುದಿಲ್ಲ ಎಂದು ಅನುಮತಿ ನಿರಾಕರಿಸಿದ್ದರು. ಹಿಂದಿನ ದಿನ ರಾತ್ರಿ ಆರ್ಸಿಬಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಕುಣಿದು ಕುಪ್ಪಳಿಸಿದ್ದರು. ಪೊಲೀಸರಿಗೆ ಅದನ್ನು ನಿರ್ವಹಿಸುವುದೇ ಕಷ್ಟವಾಗಿತ್ತು. ಅವರು ಬೆಳಗ್ಗೆ ಅದರ ಬ್ರೀಫಿಂಗ್ಗೂ ಹೋಗಿರಲಿಲ್ಲ. ಪೆಂಡಾಲ್ ಹಾಕುವುದನ್ನು ನೋಡಿಯೇ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಸಿಎಂಗೆ ತಿಳಿಸಿದ್ದರು ಎಂದು ಹೇಳಿದರು.ಇದನ್ನೂ ಓದಿ: ಬಿಎಂಟಿಸಿ ಬಸ್ಸು ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸಾವು
ಇನ್ನೂ ವಿಜಯೋತ್ಸವಕ್ಕೆ ಅನುಮತಿ ಕೊಡುವ ವಿಚಾರವಾಗಿ ಸಿಎಂ ಹಾಗೂ ಡಿಸಿಎಂ ಮಧ್ಯೆಯೇ ಪೈಪೋಟಿ ಇತ್ತು. ಹೀಗಾಗಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಲಾಗಿದೆ. ತಮ್ಮ ಮೇಲಿನ ಆರೋಪ ತಳ್ಳಿ ಹಾಕಲು ಅಧಿಕಾರಿಗಳ ಅಮಾನತು ಮಾಡಿದ್ದಾರೆ. ಇದೊಂದು ತಪ್ಪಿಸಿಕೊಳ್ಳುವ ತಂತ್ರ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.
ಸಿಎಂ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದಿದ್ದು ಯಾಕೆ? ಅವರು ಏನಾದರೂ ತಪ್ಪು ಮಾಡಿರಬೇಕಲ್ಲ? ಅವರ ಮೇಲೆ ಎಫ್ಐಆರ್ ಯಾಕೆ ಆಗಿಲ್ಲ? ಕೆಲವರನ್ನು ಅಮಾನತು ಮಾಡಿ, ಜನರು ಈ ಕೇಸ್ ಮರೆಯಬೇಕೆಂದು ಹೀಗೆ ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದು ಯಾರು? ಇನ್ನೂ ಸಿಎಂ, ಸಚಿವರ ಮಕ್ಕಳು ವಿಧಾನಸೌಧದ ಎದುರು ಸೆಲ್ಫಿ ತೆಗೆದುಕೊಂಡರು. ನೂರಾರು ಜನ ವೇದಿಕೆಯಲ್ಲಿದ್ದರು. ಸಿಎಂ ಹುದ್ದೆ ಬಗ್ಗೆ ನಮಗೆ ಗೌರವವಿದೆ. ಅವರು ನಮ್ಮ ರಾಜ್ಯದ ನಾಯಕರು, ಸಿಎಂ ಇರುವ ವೇದಿಕೆಯಲ್ಲಿ ಹೀಗೆಲ್ಲ ಮಾಡಿದ್ದು ಎಷ್ಟು ಸರಿ? ಇದಕ್ಕೆ ಯಾರು ಹೊಣೆ? ಕಾಲ್ತುಳಿತದ ಬಳಿಕ ಮಧ್ಯಾಹ್ನ 3:10ಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಮೊದಲ ನಿಧನ ಆಯಿತು. ಅದಾದ ಬಳಿಕವೂ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂಗೆ ನಾಚಿಕೆ ಆಗೋದಿಲ್ವಾ? ಇದಕ್ಕೆಲ್ಲ ಕೋರ್ಟ್ ಕಠಿಣ ಕ್ರಮ ಕೈಗೊಳ್ಳಲಿದೆ. ಇವರು ಸರ್ಕಾರದಲ್ಲಿ ಮುಂದುವರೆಯೋಕೆ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ವರದಕ್ಷಿಣೆ ದುರಾಸೆಗೆ 2ನೇ ಮದುವೆಗೆ ರೆಡಿಯಾಗಿದ್ದ ವ್ಯಕ್ತಿಗೆ ಪತ್ನಿಯಿಂದ ಚಪ್ಪಲಿ ಏಟು