ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್

Public TV
2 Min Read

ಮಡಿಕೇರಿ: ಹಿಜಬ್ ಪ್ರಕರಣದಿಂದ ರಾಜ್ಯದಲ್ಲಿ ದೊಡ್ಡಮಟ್ಟದ ಚಿಂತನಾ ಮಂಥನ ಉಂಟಾಗಿದ್ದು, ಇದರಿಂದ ಹಿಂದೂ ಸಮಾಜ ಜಾಗೃತವಾಗುತ್ತಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕೊಡಗಿನ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಎಡವಿರುವ ಹಿಂದೂ ಸಮಾಜ ಸುಧಾರಿಸಿಕೊಳ್ಳುತ್ತಿದೆ. ಇಲ್ಲಿವರೆಗಿನ ಹಿಂದೂ ಸಂಘಟನೆಗಳ ಜಾಗೃತಿ ಹೋರಾಟ ಯಶಸ್ವಿಯಾಗಿದೆ. ಮುಂದೆ ವಕ್ಛ್ ಬೋರ್ಡ್ ಗೋಲ್ಮಾಲ್, ಅಜಾನ್ ಮೈಕ್ ಕಿರಿಕಿರಿ, ಗೋಹತ್ಯೆ, ಬೈಬಲ್ ಬೋಧನೆ ವಿರೋಧಿ ಹೋರಾಟ ಮತ್ತು ಮತಾಂತರ ನಿಷೇದ ಕಾಯ್ದೆ ಜಾರಿಗೆ ಒತ್ತಾಯಿಸಿ ಹೋರಾಟ ಮುಂದುವರಿಯಲಿದೆ ಎಂದರು. ಇದನ್ನೂ ಓದಿ: ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ, ಶಿವಾಜಿ ಮೂರ್ತಿ ಭಗ್ನ

ಮೈಸೂರು ಜಿಲ್ಲೆಯ ಕೌಲಂದೆಯಲ್ಲಿ ರಂಜಾನ್ ಮೆರವಣಿಗೆ ಸಂದರ್ಭ ಛೋಟಾ ಪಾಕಿಸ್ತಾನ ಎಂಬ ಘೋಷಣೆ ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಹಿಂದೂ ಸಮಾಜವನ್ನು ಇಂದಿಗಿಂತ ಇನ್ನೂ 100 ಪಟ್ಟು ಹೆಚ್ಚು ಜಾಗೃತಿಗೊಳಿಸುವ ಅಗತ್ಯವಿದೆ. ಅಜಾನ್‌ನಿಂದ ಉಂಟಾಗುವ ಶಬ್ಧ ಮಾಲಿನ್ಯ, ಸುಪ್ರೀಂ ತೀರ್ಪು ಉಲ್ಲಂಘನೆ ವಿರೋಧಿಸಿ ಇದೇ ತಿಂಗಳು 9 ರಂದು ರಾಜ್ಯದ ಒಂದು ಸಾವಿರ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಹಿಂದೂ ಸಂಘಟನೆಗಳಿಂದ ಸುಪ್ರಭಾತ, ಓಂಕಾರ, ಶಿವನಾಮಜಪ, ಹನುಮಾನ್ ಚಾಲೀಸ ಪಠಣ ನಡೆಯಲಿದೆ ಎಂದು ತಿಳಿಸಿದರು.

ರಾಜಕೀಯ ಸ್ವಾರ್ಥದಿಂದ ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗುತ್ತದೆ. ಬಿಜೆಪಿ ಸರ್ಕಾರ ಇದ್ದರೂ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧ ಸಾಧ್ಯವಾಗದಿರುವ ಹಿಂದೆ ಹೀನ ರಾಜಕಾರಣವಿದೆ. ಇಸ್ಲಾಂ ಕ್ರೌರ್ಯಕ್ಕೆ ಕಡಿವಾಣ ಹಾಕಲು ಈ ಎರಡು ಸಂಘಟನೆಗಳ ನಿಷೇಧ ಅವಶ್ಯಕವಾಗಿದೆ ಎಂದರು. ಇದನ್ನೂ ಓದಿ: ಕರಾವಳಿಯಲ್ಲಿ ಚರ್ಚ್‍ಗೆ ನುಗ್ಗಿ ದಾಂಧಲೆ- ಭಗವಾಧ್ವಜ ಹಾರಿಸಿ ಹನುಮಂತನ ಪೂಜೆ!

ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಭಯೋತ್ಪಾದಕರನ್ನು ಬೆಳೆಸಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತ ಹಿಂದೂ ಸಮಾಜಕ್ಕೆ ಪೂರಕವಾದ ಕೆಲವೊಂದು ಕಾಯ್ದೆ, ಕಾನೂನು, ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಇದು ತೃಪ್ತಿದಾಯಕವಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ವೈಫಲ್ಯದಿಂದ ಗೋಕಳ್ಳತನ, ಹತ್ಯೆ, ಮಾರಾಟ ಅಕ್ರಮ ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಈ ಸಂಬಂಧ ಟಾಸ್ಕ್ ಫೋರ್ಸ್ ರಚನೆ, ವಿಶೇಷ ಚೆಕ್ ಪೋಸ್ಟ್, ಪೊಲೀಸ್ ಠಾಣಾಧಿಕಾರಿಗಳಿಗೆ ವಿಶೇಷ ನಿರ್ದೇಶನ ಸೇರಿದಂತೆ 10 ಪ್ರಶ್ನೆಗಳನ್ನು ಪಶುಸಂಗೋಪನಾ ಸಚಿವರ ಮುಂದಿಡಲಾಗುವುದು ಎಂದರು.

ಹಲವೆಡೆ ಪ್ರಮೋದ್ ಮುತಾಲಿಕ್ ಅವರಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ತಡೆಯುವ ಮೂಲಕ ಹಿಂದುತ್ವಕ್ಕೆ, ಸಂವಿಧಾನಕ್ಕೆ, ಸ್ವಾತಂತ್ರ‍್ಯಕ್ಕೆ ಬಿಜೆಪಿ ತಡೆಯೊಡ್ಡುತ್ತಿದೆ. ಹಿಂದೂಗಳ ಮಾನಸಿಕತೆ ಕುಗ್ಗಿಸಲಾಗುತ್ತಿದೆ. ಇಂತಹ ಪ್ರಕ್ರಿಯೆಗಳನ್ನು ನಿಲ್ಲಿಸದಿದ್ದಲ್ಲಿ ಹಿಂದೂ ಸಮಾಜ ಭುಗಿಲೆದ್ದು ಬಿಜೆಪಿಯನ್ನು ಧೂಳಿಪಟ ಮಾಡಲಿದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *