ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

Public TV
3 Min Read

– ನಮ್ಮ ಕ್ಷಿಪಣಿಗಳಿಂದ ಹೊಮ್ಮಿದ್ದು ಪ್ರತೀಕಾರದ ಪ್ರವಾಹ

ನವದೆಹಲಿ: ಲೋಕಸಭೆಯ (Lok Sabha) ಮಾನ್ಸೂನ್‌ ಅಧಿವೇಶನ ಆರಂಭವಾದ ದಿನದಿಂದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದವು. ಅದರಂತೆ ಇಂದು (ಜುಲೈ 28 ಸೋಮವಾರ) ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರು, ಲೋಕಸಭೆಯಲ್ಲಿ ಈ ಚರ್ಚೆಗೆ ನಾಂದಿ ಹಾಡಿದರು.

ನಮ್ಮದು ಪ್ರತೀಕಾರದ ದಾಳಿಯಾಗಿತ್ತು
ಲೋಕಸಭೆಯಲ್ಲಿ ಆಪರೇಷನ್‌ ಸಿಂಧೂರ (Operation Sindoor) ಕುರಿತು ಭಾಷಣ ಮಾಡಿದ ರಾಜನಾಥ್‌ ಸಿಂಗ್‌, ಈ ಸೇನಾ ಕಾರ್ಯಾಚರಣೆ ಭಾರತದ ಸೇನಾ ಸಾಮರ್ಥ್ಯಕ್ಕೆ ಉದಾಹರಣೆ ಮಾತ್ರವಲ್ಲದೇ, ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಪ್ರತೀಕ ಎಂದು ಬಣ್ಣಿಸಿದರು. ಪಾಕಿಸ್ತಾನದ ದಾಳಿ ವೇಳೆ ಭಾರತದ್ದು ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ಭಾರತ ಯಾರನ್ನೂ ಉದ್ದೇಶ ಪೂರ್ವಕವಾಗಿ ಟಾರ್ಗೆಟ್‌ ಮಾಡಿಲ್ಲ. ಆದ್ರೆ ಪಾಕಿಸ್ತಾನ (Pakistan) ನಮ್ಮ ವಿಮಾನ ನಿಲ್ದಾಣ, ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನು ನಮ್ಮ ಸೇನೆ ವಿಫಲಗೊಳಿಸಿದೆ. ಒಂದೇ ಒಂದು ನಿಗದಿತ ಸ್ಥಳದಲ್ಲಿ ಪಾಕಿಸ್ತಾನಕ್ಕೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸತ್‌ಗೆ ತಿಳಿಸಿದರು.

ಪಾಕಿಸ್ತಾನದ ದಾಳಿಗೆ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಭಾರತ ಪ್ರತಿ ದಾಳಿ ನಡೆಸಿತು. ಪಾಕಿಸ್ತಾನದ ವಿಮಾನ ನಿಲ್ದಾಣ, ಸೇನಾ ನೆಲೆ, ಏರ್‌ ಡಿಫೆನ್ಸ್ ಸಿಸ್ಟಮ್ (ರಕ್ಷಣಾ ವ್ಯವಸ್ಥೆ) ಗಳನ್ನ ಟಾರ್ಗೆಟ್‌ ಮಾಡಿ ಧ್ವಂಸಗೊಳಿಸಿತು. ಮೂರು ಸೇನಾಪಡೆಗಳನ್ನ ಬಳಸಿಕೊಂಡು ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ತಕ್ಕ ಉತ್ತರ ನೀಡಲಾಯಿತು ಎಂದು ವಿವರಿಸುತ್ತಿದ್ದರು. ಈ ವೇಳೆ ವಿಕ್ಷಗಳಿಂದ ಗದ್ದಲ ಶುರುವಾಯಿತು, ಭಾಷಣಕ್ಕೆ ಅಡ್ಡಿಪಡಿಸುವ ಪ್ರಯತ್ನವೂ ನಡೆಯಿತು. ಆದಾಗ್ಯೂ ರಾಜನಾಥ್‌ ಸಿಂಗ್‌ ಮಾತು ಮುಂದುವರಿಸಿದ್ರು.

ಪಾಕ್‌ ಕೆಣಕಿದ್ರೆ ಸುಮ್ಮನಿರಲ್ಲ
ಗಡಿ ದಾಟುವುದು, ಅಲ್ಲಿನ ಪ್ರದೇಶವನ್ನ ವಶಕ್ಕೆ ಪಡೆಯುವುದು ನಮ್ಮ ಉದ್ದೇಶವಾಗಿರಲಿಲ್ಲ. ಪಹಲ್ಗಾಮ್‌ ದಾಳಿಗೆ ಪ್ರತಿಕಾರ, ಭಯೋತ್ಪಾದಕ ನೆಲೆಗಳನ್ನ ಧ್ವಂಸ ಮಾಡುವುದು, ಫ್ರಾಕ್ಸಿ ವಾರ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ನಮ್ಮ ಉದ್ದೇಶವಾಗಿತ್ತು. ಇದರಲ್ಲಿ ಪಾಕಿಸ್ತಾನ ಸೋಲು ಒಪ್ಪಿಕೊಂಡಿತು. ದಾಳಿಯನ್ನ ನಿಲ್ಲಿಸುವಂತೆ ಮನವಿ ಮಾಡಿಕೊಂಡಿತು. ಪಾಕಿಸ್ತಾನದ ಡಿಜಿಎಂಓ ಮನವಿ ಬಳಿಕವೇ ಕದನ ವಿರಾಮ ಮಾಡಿಕೊಳ್ಳಲಾಯಿತು. ಆದ್ರೆ ಆಪರೇಷನ್‌ ಸಿಂಧೂರ ಇನ್ನೂ ಮುಗಿದಿಲ್ಲ. ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪಾಕ್‌ ಪ್ರಚೋದನೆ ನೀಡಿದ್ರೆ ಮತ್ತೆ ಆಪರೇಷನ್‌ ಶುರುವಾಗಲಿದೆ. ಆಪರೇಷನ್‌ ಸಿಂಧೂರದಿಂದ ನಮ್ಮ ಸೈನಿಕರ ಮನೋಬಲ ಹೆಚ್ಚಾಗಿದೆ ಎಂದು ಇಂಚಿಂಚೂ ಮಾಹಿತಿ ನೀಡಿದರು.

ಪಹಲ್ಗಾಮ್‌ ದಾಳಿ ವಿವರಿಸಿದ ಸಚಿವ
ಇದರೊಂದಿಗೆ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ಗುಂಪೊಂದು ಅಮಾಯಕ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿತು. ಈ ದಾಳಿಯಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದಂತೆ ಒಟ್ಟು 26 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಭಯೋತ್ಪಾದಕರು ಪ್ರವಾಸಿಗರ ಧರ್ಮ ಕೇಳಿ ಅವರ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶದ ಅಲೆಯನ್ನೇ ಸೃಷ್ಟಿಸಿತ್ತು. ಈ ದಾಳಿಯನ್ನು ಲಷ್ಕರ್-ಎ-ತೋಯ್ಬಾ ಸಂಘಟನೆಯ ಅಂಗಸಂಸ್ಥೆ ದಿ ರೆಸಿಸ್ಟನ್ಸ್‌ ಫ್ರಂಟ್‌ (ಟಿಆರ್‌ಎಫ್‌) ನಡೆಸಿತ್ತು ಎಂದು ರಾಜನಾಥ್‌ ಸಿಂಗ್‌, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಆರಂಭಿಸಲು ಕಾರಣವಾದ ಘಟನೆಗಳನ್ನು ವಿವರಿಸಿದರು.

Share This Article