ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗೆ ಅನುದಾನದ ಕೊರತೆಯಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ (CT Scan) ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ (MRI Scan) ಸೇವೆಗಳು ಸ್ಥಗಿತಗೊಂಡಿವೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಆರೋಗ್ಯ ಇಲಾಖೆ (Health Department) ಸ್ಪಷ್ಟನೆ ನೀಡಿದೆ.

ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ ಮಾಧ್ಯಮಗಳಲ್ಲಿ ಬಂದಿರುವ ವರದಿ ನಿರಾಧಾರ ಎಂದಿದೆ.ಇದನ್ನೂ ಓದಿ: ಗುತ್ತಿಗೆಯಲ್ಲಿ ಮೀಸಲಾತಿ ಕೊಡಿ – ಅಧಿಕಾರಿಗಳಿಗೆ ನರೇಂದ್ರಸ್ವಾಮಿ ಸೂಚನೆ

ರಾಜ್ಯದಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅನುದಾನದ ಕೊರತೆಯಿದೆ ಎಂಬ ಮಾಧ್ಯಮ ವರದಿಗಳು ಆಧಾರ ರಹಿತವಾಗಿದೆ. ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅಗತ್ಯವಿರುವ 63.49 ಕೋಟಿ ರೂ. ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು, ಯಾವುದೇ ರೀತಿಯ ಅನುದಾನದ ಕೊರತೆಯಾಗಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ರಾಜ್ಯದಲ್ಲಿ ಒಟ್ಟು 3 ಸಂಸ್ಥೆಗಳು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳನ್ನು ಒದಗಿಸುತ್ತಿವೆ. ಅದರಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯು ಬಿಲ್ ಪಾವತಿಗಾಗಿ ನೀಡಿದ ದಾಖಲಾತಿಗಳಲ್ಲಿ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ವಿವರಣೆ ಕೇಳಲಾಗಿದೆ. ಜೂನ್ & ಜುಲೈ 2 ತಿಂಗಳುಗಳ ಬಿಲ್ ಪಾವತಿಯಲ್ಲಿ ಮಾತ್ರವೇ ವಿಳಂಬವಾಗಿದೆ. ಉಳಿದ ಸಂಸ್ಥೆಗಳ ಬಿಲ್ ಪಾವತಿಯಲ್ಲಿ ಯಾವುದೇ ಬಾಕಿ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಇಲಾಖೆ ಕೇಳಿರುವ ಪೂರಕ ಮಾಹಿತಿಯನ್ನ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆ (Krsnaa Diagnostics) ಒದಗಿಸಿದ ತಕ್ಷಣ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಸ್ಥೆಯಿಂದ ಆಗಿರುವ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳ ವ್ಯತ್ಯಯವನ್ನು ಸರಿಪಡಿಸಲು ಬದಲಿ ಕ್ರಮವನ್ನೂ ಈಗಾಗಲೇ ಕೈಗೊಳ್ಳಲಾಗಿದೆ. ಈ ಕೂಡಲೇ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳನ್ನು ಪುನರಾರಂಭಿಸಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವ್ಯತ್ಯಯ ಕಂಡುಬಂದಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮಗುವಿನ ಜನನದ ಬಗ್ಗೆ ಅನುಮಾನ – 5 ವರ್ಷದ ಮಗುವನ್ನೇ ಕೊಂದ ಪಾಪಿ ತಂದೆ!

Share This Article