ಪ್ರಧಾನಿ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ: ಸಚಿವ ಸುಧಾಕರ್

Public TV
2 Min Read

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರು ಇಡೀ ದೇಶದಲ್ಲೇ ಇಲ್ಲ ಎಂಬುದನ್ನು ಕಾಂಗ್ರೆಸ್ ನಾಯಕರು ಮೊದಲು ಅರಿಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ಬಿಜೆಪಿ-ಕರ್ನಾಟಕ ವತಿಯಿಂದ ದಾವಣಗೆರೆಯಲ್ಲಿ ನಡೆದ ಜನಸ್ವರಾಜ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದು ವಿರೋಧ ಪಕ್ಷದ ಇಬ್ಬರು ನಾಯಕರು ಹೇಳಿದ್ದಾರೆ. ದೇಶ ವಿಭಜನೆ ಮಾಡಲು ಜಾತಿ ವಿಷಬೀಜ ಬಿತ್ತುವುದು, ಧರ್ಮಗಳ ನಡುವೆ ವಿವಾದ ತರುವುದು ಕಾಂಗ್ರೆಸ್ ಪಕ್ಷದ ಪ್ರತೀತಿ. ಕೆಲ ನಾಯಕರು ಅಹಿಂದ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಚ್ಯುತಿ ತರುವ ಆಲೋಚನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕ ಇಡೀ ದೇಶದಲ್ಲೇ ಇಲ್ಲ ಎಂಬುದನ್ನು ಅಹಿಂದ ಎಂದು ಹೇಳುವ ರಾಜ್ಯದ ನಾಯಕರು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಪ್ರಧಾನಿ ಮೋದಿಯವರು 20 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ್ದಾರೆ. ಆದರೂ ಅವರು ಜಾತೀಯತೆಯನ್ನು ಮಾಡಲಿಲ್ಲ. ಸಬ್ ಕಾ ವಿಶ್ವಾಸ್ ಎಂದು ಎಲ್ಲರ ವಿಶ್ವಾಸ ಗಳಿಸಿದರು. ಆದರೆ ಕಾಂಗ್ರೆಸ್‌ ಪಕ್ಷ ಹಿಂದುಳಿದವರು, ದಲಿತರು, ವೀರಶೈವ ಲಿಂಗಾಯತರನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸತತ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಬಿಜೆಪಿ ಸರ್ಕಾರ ಇಡೀ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಕೋವಿಡ್ ಸಮಯದಲ್ಲಿ ಜನರ ಆರೋಗ್ಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ‘ಕಾಮನ್ ಮ್ಯಾನ್’ ಆಗಿ ಆಡಳಿತ ನಡೆಸುತ್ತಿದ್ದಾರೆ. ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುವವರು ಅವರೆಲ್ಲ ಜೀತದಾಳಾಗಿ ಇರಲಿ ಎಂದು ಬಯಸುತ್ತಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವವರು ಅವರ ಉದ್ಧಾರಕ್ಕಾಗಿ ಏನೂ ಮಾಡಿಲ್ಲ. ಆದರೆ ಪ್ರಧಾನಿಗಳು ಮುದ್ರಾ ಯೋಜನೆ ತಂದು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ನೆರವಾಗಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗುವುದು ಬಹಳ ಕಷ್ಟ. ಜನರಿಗೆ ಹೇಗೆ ಸ್ಪಂದಿಸುತ್ತಾರೆ, ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಗ್ರಾಮದ ಮತದಾರರು ನೋಡುತ್ತಾರೆ. ಈ ಸವಾಲು ಎದುರಿಸಿ ಆಯ್ಕೆಯಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಈಗ ನಡೆಯುತ್ತಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಯಾವುದೇ ಕಾಯ್ದೆಯ ತಿದ್ದುಪಡಿ, ರಚನೆ ಆಗಬೇಕೆಂದರೆ ಎರಡೂ ಮನೆಗಳಲ್ಲಿ ಬೆಂಬಲ ಪಡೆಯಬೇಕು. ಬಿಜೆಪಿ ವಿಧಾನಪರಿಷತ್‌ನಲ್ಲಿ ಹೆಚ್ಚಿನ ಸಂಖ್ಯೆ ಪಡೆಯಲು ಅವಕಾಶ ಒದಗಿ ಬಂದಿದೆ. ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು ವಿಧಾನಪರಿಷತ್‌ಗೆ ಉತ್ತಮರನ್ನು ಆಯ್ಕೆ ಮಾಡಬೇಕು. ಆಮಿಷದ ಮತಾಂತರ ತಡೆಯಲು ಕಾಯ್ದೆ ತರಬೇಕಿದೆ. ಇಂತಹ ಕಾನೂನು ತರಲು ಮೇಲ್ಮನೆಯಲ್ಲಿ ಹೆಚ್ಚಿನ ಬಲ ಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

ವಿಧಾನಪರಿಷತ್ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಸ್ವಾಭಿಮಾನದಿಂದ ಗೆದ್ದಿರುತ್ತಾರೆ. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಇದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಿದಂತಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *