ನನ್ನ ಕ್ಷೇತ್ರವೊಂದರಲ್ಲೇ 224 ಶಾಲೆಗಳಲ್ಲಿ ಶೌಚಾಲಯ ಇಲ್ಲ: ಹೆಚ್.ಡಿ‌.ರೇವಣ್ಣ ಬೇಸರ

Public TV
1 Min Read

ಹಾಸನ: ನನ್ನ ಕ್ಷೇತ್ರವೊಂದರಲ್ಲೇ 224 ಶಾಲೆಗಳಲ್ಲಿ ಶೌಚಾಲಯ ಇಲ್ಲ. ಇರುವ ಕಡೆ ಶಿಕ್ಷಕರೇ ಸ್ವಚ್ಛ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಹೆಚ್.ಡಿ‌.ರೇವಣ್ಣ (H.D.Revanna) ಬೇಸರ ವ್ಯಕ್ತಪಡಿಸಿದರು.

ಹಾಸನ (Hassan) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬಂದರು. ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟರು. ಜಿಪಂನಲ್ಲಿ ಕೇಸರಿಬಾತ್, ಉಪ್ಪಿಟ್ಟು ತಿಂದು ಹೋದರು. ಶೌಚಾಲಯ ತೊಳೆಯುವ ಶಿಕ್ಷಕರ ಸ್ಥಿತಿ ಏನಾಗಬೇಕು. ಇಂಥ ಪರಿಸ್ಥಿತಿ ನಾಚಿಕೆಗೇಡು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಗುತ್ತಿಗೆದಾರ ಅಂಬಿಕಾಪತಿಯ ಸಾವಿನ ಬಗ್ಗೆ ಕೂಲಂಕುಷ ತನಿಖೆಯಾಗಬೇಕು: ಯತ್ನಾಳ್‌ ಆಗ್ರಹ

ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಟಾಂಗ್ ನೀಡಿದ ರೇವಣ್ಣ, ಅವರು ಕುಮಾರಣ್ಣನ ಬಳಿ ವ್ಯಾಪಾರ ಮಾಡಿಕೊಂಡು ಹೋಗಿರುವವರು. ಅವರ ಪಕ್ಷದವರೇಕೆ 2009 ರಲ್ಲಿ ನಮ್ಮ ಬಳಿ ಬಂದಿದ್ದರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಹಾಲಿ ಇರುವುದು ನೆಹರೂ, ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್. ಪಕ್ಷ ಹಾಗೂ ಮುಖಂಡರು ಶೀಘ್ರ ಧೂಳೀಪಟ ಆಗುವ ಕಾಲ ಬರಲಿದೆ ಎಂದು ಭವಿಷ್ಯ ನುಡಿದರು. ರಾಜ್ಯದ ದುಡ್ಡಿನಿಂದ ತೆಲಂಗಾಣದಲ್ಲಿ ಚುನಾವಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಆಸೆ ತೋರಿಸಿ ರಾಜ್ಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಡಿಕೆಶಿಗೆ ಹೈಕೋರ್ಟ್‍ನಿಂದ ರಿಲೀಫ್ ಸಿಕ್ಕಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಹೆಚ್‍ಡಿಕೆ

ಜಿಲ್ಲೆಯಲ್ಲಿ ಕೊಬ್ಬರಿ ಬೆಳೆಗಾರರ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಬೆಂಬಲ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್‌ನವರು ಈಗ ಮೌನವಾಗಿದ್ದಾರೆ. ಇದನ್ನು ಖಂಡಿಸಿ ಡಿ.2 ರಂದು ಹೇಮಾವತಿ ಪ್ರತಿಮೆ ಬಳಿಯಿಂದ ಡಿಸಿ ಕಚೇರಿ ವರೆಗೆ ಕೊಬ್ಬರಿಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ರೇವಣ್ಣ ಎಚ್ಚರಿಸಿದರು.

Share This Article