ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಐಜಿಪಿ ಅಂದ್ರೆ ಕೈಗೊಬ್ಬ, ಕಾಲಿಗೊಬ್ಬ ಅಂತ ಪೊಲೀಸರು ಸೇವೆಗೆ ಇರ್ತಾರೆ. ಐಜಿಪಿ ಬಂಗ್ಲೆಯಲ್ಲಿ ಸೇವೆಗೆ 15 ಮಂದಿ ಪೊಲೀಸರು ಇರ್ತಾರೆ. ಆದ್ರೆ ಐಜಿಪಿ ಬಂಗಲೆಯಲ್ಲೇ ಕಳ್ಳತನ ನಡೆಯುತ್ತೆ ಅಂದ್ರೆ ಏನ್ ಹೇಳಬೇಕು ಹೇಳಿ.
ಹೌದು. ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಪಕ್ಕದಲ್ಲಿರುವ ಪಶ್ಚಿಮ ವಲಯ ಐಜಿಪಿಯ ನಿವಾಸದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಎಕರೆ ಪ್ರದೇಶದ ಈ ಬಂಗ್ಲೆಯಲ್ಲಿ ಕಳ್ಳರಿದ್ದಾರಾ ಅನ್ನೋ ಸಂಶಯ. ಯಾಕಂದ್ರೆ ಭದ್ರವಾದ ಕಾಂಪೌಂಡ್ ಹಾಗೂ 15 ಮಂದಿ ಪೊಲೀಸರ ಭದ್ರತೆ ಇರುವ ಈ ಬಂಗ್ಲೆಯ ಆವರಣದಿಂದ 2 ಲಕ್ಷ ಮೌಲ್ಯದ 5 ಶ್ರೀಗಂಧ ಮರಗಳು ರಾತ್ರೋರಾತ್ರಿ ಕಳ್ಳತನವಾಗಿವೆ. ದೊಡ್ಡದಾಗಿ ಬೆಳೆದಿದ್ದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಐದು ಮರಗಳನ್ನು ಬುಡದಿಂದ್ಲೇ ಕತ್ತರಿಸಿ ಸಾಗಿಸಿದ್ದಾರೆ.
ಕಳೆದ ಜುಲೈ 28ರಂದು ಈ ಘಟನೆ ನಡೆದಿತ್ತು. ಕಳ್ಳತನ ನಡೆದಾಗ ಹರಿಶೇಖರನ್ ಐಜಿಪಿಯಾಗಿದ್ದರು. ನಂತರ ಹೇಮಂತ್ ನಿಂಬಾಳ್ಕರ್ ಐಜಿಪಿಯಾಗಿ ಬಂಬ ಬಳಿಕ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ತಿಂಗಳಾಗ್ತಾ ಬಂದ್ರೂ ತನಿಖೆ ನಡೆದಿಲ್ಲ. ಪ್ರಕರಣ ಇನ್ನೂ ಅರಣ್ಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ಪೊಲೀಸರೇ ಶ್ರೀಗಂಧ ಮರಗಳನ್ನ ಕದ್ದು ಸಾಗಿಸಿದ್ರಾ ಅನ್ನೋ ಅನುಮಾನ ಮೂಡಿದೆ.