ಗ್ರಹಣ ದಿನದ ಪೂಜೆ ಮಾಡಿಸಲು ಹೋದವರ ಮನೆಯಲ್ಲಿ ಕಳ್ಳತನ!

Public TV
1 Min Read

ಶಿವಮೊಗ್ಗ: ಗ್ರಹಣ ದಿನದಂದು ಪೂಜೆ ಮಾಡಿಸಿದರೆ ಶುಭವಾಗಲಿದೆ ಎಂದು ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿಯೇ ನಗರದ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.

ನಗರದ ಎಂಆರ್‌ಎಸ್‌ ಸಮೀಪದ ಮೆಸ್ಕಾಂ ಕ್ವಾಟ್ರಸ್‍ನ ಮೆಸ್ಕಾಂ ಎಂಜಿನಿಯರ್ ಶಿವಸ್ವಾಮಿ ಹಾಗೂ ಜೆಇ ಮಂಜು ಅವರ ಮನೆಗಳಲ್ಲಿ ಹಾಡಹಗಲೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಕಳ್ಳತನ ಮಾಡಿದ್ದಷ್ಟೇ ಅಲ್ಲದೆ ಶಿವಸ್ವಾಮಿ ಅವರ ಮನೆಯಲ್ಲಿದ್ದ ಬೆಡ್, ಸೋಫಾ ಬೀರುಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಗ್ರಹಣ ನಿಮಿತ್ತ ಇಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿರುವ ದೇವಸ್ಥಾನಗಳಿಗೆ ಶಿವಸ್ವಾಮಿ ಹಾಗೂ ಮಂಜು ಕುಟುಂಬ ಒಟ್ಟಿಗೆ ಪೂಜೆ ಮಾಡಿಸಲು ಕಾರಿನಲ್ಲಿ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದು ಗೊತ್ತಾಗುತ್ತಿದ್ದಂತೆ ಕಳ್ಳರು ಮನೆಯ ಹಿಂದಿನ ಬಾಗಿಲು ಮುರಿದು ಒಳ ಬಂದಿದ್ದರು. ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನು ತೆಗೆದುಕೊಂಡು ಕಾಲುಕಿತ್ತಿದ್ದಾರೆ.

ಪೂಜೆ ಮುಗಿಸಿ ಮನೆಗೆ ಬರುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದ್ದು, ಶಿವಸ್ವಾಮಿ ಅವರ ಮನೆಯಲ್ಲಿದ್ದ 7 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಹಾಗೂ ಮಂಜು ಅವರ ಮನೆಯಲ್ಲಿದ್ದ 58 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, 35 ಸಾವಿರ ನಗದನ್ನು ಕಳುವಾಗಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *