ದೇಶಕ್ಕೆ ಹಲವು ಬಾರಿ ಸ್ವರ್ಣ ಪದಕ ಕೊಟ್ಟ ಯುವತಿ ಮೇಲೆ ಅತ್ಯಾಚಾರ- ವೈದ್ಯನಿಂದ ವಂಚನೆ

Public TV
1 Min Read

ಶಿವಮೊಗ್ಗ: ಜಲಕ್ರೀಡೆಯಲ್ಲಿ ದೇಶಕ್ಕೆ ಹಲವು ಬಾರಿ ಸ್ವರ್ಣ ಪದಕ ತಂದಿರುವ ಕೊಲ್ಲಾಪುರದ ಯುವತಿಗೆ ಕರ್ನಾಟಕದ ವೈದ್ಯನಿಂದ ವಂಚನೆ ಆಗಿದೆ ಎಂಬ ಆರೋಪವೊಂದು ಕೇಳಿಬರುತ್ತಿದೆ.

ವೈದ್ಯ ಯುವತಿಗೆ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಮೋಸ ಮಾಡಿದ್ದಾನೆ ಎಂದು ಕ್ರೀಡಾಪಟು ಕೊಲ್ಲಾಪುರ ಕರವೀರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ. ಆಕಾಶ್ ಅವಟಿ ಅತ್ಯಾಚಾರ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ವೈದ್ಯ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಯುವತಿ ಮನೆಗೆ ಬ್ರೋಕರ್ ಬಂದು ಮದುವೆ ಮಾತುಕತೆ ನಡೆಸಿ ಪರಿಚಯ ಮಾಡಿಕೊಂಡಿದ್ದನು. ಎರಡು ವರ್ಷಗಳ ಕಾಲ ಆಕೆಯನ್ನು ಬಳಸಿಕೊಂಡು ಇತ್ತೀಚೆಗೆ ನಾಪತ್ತೆ ಆಗಿದ್ದಾನೆ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ದೂರು ದಾಖಲಿಸಿಕೊಂಡು ಆತನನ್ನು ಹುಡುಕುತ್ತಿದ್ದರು. ಇದೇ ಸಮಯದಲ್ಲಿ ಶಿವಮೊಗ್ಗದ ಯುವತಿಯೊಂದಿಗೆ ವೈದ್ಯ ಮದುವೆ ನಿಶ್ಚಯ ಮಾಡಿಕೊಂಡಿದ್ದನು. ಗುರುವಾರ ಶಿವಮೊಗ್ಗದಲ್ಲಿ ಮದುವೆ ಕೂಡ ಆಗಬೇಕಿತ್ತು. ಅಷ್ಟರಲ್ಲಿ ಕ್ರೀಡಾಪಟು ಯುವತಿಗೆ ಈ ವಿಷಯ ತಿಳಿದಿದೆ. ಮಾಹಿತಿ ತಿಳಿದ ಯುವತಿ ಮಹಾರಾಷ್ಟ್ರ ಪೊಲೀಸರ ಸಮೇತ ಶಿವಮೊಗ್ಗದ ಮದುವೆ ಮನೆಗೆ ಬಂದಿದ್ದಾರೆ. ಈ ವಿಷಯ ತಿಳಿದ ವರ ಮದುವೆಗೆ ಬರದೆ ಪರಾರಿಯಾಗಿದ್ದಾನೆ. ಈ ಬಗ್ಗೆ ತುಂಗಾ ನಗರ ಠಾಣೆಯಲ್ಲೂ ಈ ಕ್ರೀಡಾಪಟು ದೂರು ದಾಖಲಿಸಿದ್ದಾರೆ.

ಮೊದಲ ದೂರು ದಾಖಲಿಸಿಕೊಂಡಿದ್ದ ಮಹಾರಾಷ್ಟ್ರ ಪೊಲೀಸರು ವೈದ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಆತ ಬೆಂಗಳೂರು, ಕಲ್ಬುರ್ಗಿ, ಬಾಂಬೆ ಅಲ್ಲಿಂದಿಲ್ಲಿಗೆ-ಇಲ್ಲಿಂದ ಅಲ್ಲಿಗೆ ಓಡಿ ನಾಪತ್ತೆ ಆಗುತ್ತಿದ್ದಾನೆ ಎಂದು ಯುವತಿ ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *