ಯಾರಿಗೂ ಆಪರೇಷನ್ ಅಗತ್ಯವಿಲ್ಲ, ಅವರವರ ಆಪರೇಷನ್ ಅವರೇ ಮಾಡಿಕೊಳ್ತಾರೆ: ಜಗ್ಗೇಶ್

Public TV
1 Min Read

ಬೆಂಗಳೂರು: ಯಾವುದೇ ನೈತಿಕತೆ ಇಲ್ಲದೇ ರೂಪಿಸಿರುವ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಹುಕಾಲ ಉಳಿಯಲ್ಲ. ಚುನಾವಣೆಯ ಬಳಿಕ ನಡೆದ ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಅತೀ ಶೀಘ್ರದಲ್ಲೇ ಸರ್ಕಾರ ಉರುಳಲಿದೆ ಎಂದು ಬಿಜೆಪಿ ನಾಯಕ, ನಟ ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ರಚನೆ ಆಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಈಗಾಗಲೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಮುಂದೇ ಇದು ಕಾಡ್ಗಿಚ್ಚಾಗಿ ಹರಡಲಿದೆ. ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಬಂದ ಕಾರಣ ಬಹು ಬೇಗ ಹೊಂದಾಣಿಕೆ ಆಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರ ಹೊಂದಾಣಿಕೆ ಮುಂದುವರೆಯಲು ಸಾಧ್ಯವಿಲ್ಲ. ಯಾವುದೇ ನಾಯಕರು ಸಹ ಅಧಿಕಾರ ಬಿಟ್ಟುಕೊಟ್ಟು ಸುಮ್ಮನೆ ಕೂರುವುದಿಲ್ಲ. ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾವುದೇ ಅಪರೇಷನ್ ಅಗತ್ಯವಿಲ್ಲ. ಅವರವರ ಅಪರೇಷನ್ ಅವರೇ ಮಾಡಿಕೊಳ್ಳುತ್ತಾರೆ ಎಂದರು.

ನಾನು ಈ ಹಿಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಅಂದರೆ 12 ವರ್ಷಗಳ ಹಿಂದೆಯೇ ಬಿಜೆಪಿಗೆ ಬಂದೆ. ಆದರೆ ಇಂದಿಗೂ ನನ್ನನ್ನು ಆಪರೇಷನ್ ಕಮಲ ಒಳಗಾಗಿದ್ದವರು ಎಂದು ಟೀಕಿಸುತ್ತಾರೆ. ಇಂತಹ ಮಂದಿಗೆ ತಾನು ಒಂದು ಪ್ರಶ್ನೆ ಕೇಳುತ್ತೇನೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ನಾಯಕರಾ ಎಂಬುದನ್ನು ಸ್ಪಷ್ಟ ಪಡಿಸಬೇಕಿದೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿಗಳೇ ಕಣ್ಣಕ್ಕೆ ಇಳಿದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದದ್ದಾರೆ. ಆದರೆ ಮೋದಿ ಇವುಗಳನ್ನು ಮೀರಿ ಪುಟಿದೇಳುತ್ತಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

ಕೇವಲ 8 ದಿನಗಳಲ್ಲಿ ತಾನು ಚುನಾವಣೆಯ ಅಭ್ಯರ್ಥಿಯಾಗಿದ್ದು, 60 ಸಾವಿರ ಮತ ಪಡೆದಿದ್ದೇನೆ. ಆತ್ಮಸಾಕ್ಷಿಯಿಂದ ನಾನು ಚುನಾವಣೆ ಎದುರಿಸಿದ್ದೇನೆ. ಆದರೆ ವಿರೋಧಿಗಳು ಒಂದು ಮತಕ್ಕೆ 500 ರೂ. ನಿಂದ 1 ಸಾವಿರ ವರೆಗೂ ನೀಡಿದ್ದಾರೆ ಎಂದು ಆರೋಪಿಸಿದರು. ನಿಮ್ಮ ಆತ್ಮಸಾಕ್ಷಿಗೆ ಕೆಲಸ ಮಾಡಿ ಮತ ಪಡೆದಿದ್ದೀರಾ ಅಥವಾ ಕಡೆಯ ನಾಲ್ಕು ದಿನ ಹಣ ನೀಡಿ ಮತ ಪಡೆದಿದ್ದೀರಾ. ಈ ಕುರಿತು ಸಾಕ್ಷಿ ಸಮೇತ ಆಧಾರಗಳನ್ನು ನೀಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *