ಸನ್ನಡತೆ ಆಧಾರದಲ್ಲಿ ರಾಜ್ಯಾದ್ಯಂತ 108 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

Public TV
1 Min Read

ಬೆಂಗಳೂರು: ತಮಗೆ ಅರಿತೊ ಅರಿಯದೆ ಮಾಡಿದ ತಪ್ಪಿನಿಂದಾಗಿ ಜೈಲು ಸೇರಿದ್ದ ಜೈಲು ಹಕ್ಕಿಗಳಿಗೆ ಬುಧವಾರ ಬಿಡುಗಡೆ ಭಾಗ್ಯ ಲಭಿಸಿದೆ. ರಾಜ್ಯಾದ್ಯಂತ 12 ವರ್ಷಗಳ ಮೇಲ್ಪಟ್ಟು ಸೆರೆವಾಸ ಅನುಭವಿಸಿದ್ದ 108 ಸಜಾ ಬಂಧಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 50 ಬಂಧಿಗಳು ಬಿಡುಗಡೆಗೊಂಡಿದ್ದಾರೆ. ಇದರಲ್ಲಿ 80 ವರ್ಷ ಮೇಲ್ಪಟ್ಟ 5 ಜನ ಬಂಧಿಗಳು ಇರುವುದು ವಿಶೇಷವಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕಳೆದ 12 ವರ್ಷಕ್ಕೂ ಹೆಚ್ಚು ಮೇಲ್ಪಟ್ಟು ಬಂಧಿಯಾಗಿದ್ದ ಹಲವು ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಗೊಳಿಸಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಬಂಧಿಗಳಿಗೆ ಬಿಡುಗಡೆ ಪತ್ರ ವಿತರಿಸಿದರು.

ಪರಪ್ಪನ ಅಗ್ರಹಾರ ಜೈಲಿನಿಂದ 45 ಪುರುಷ ಹಾಗೂ 5 ಮಹಿಳಾ ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಲಾಗಿದೆ. ಜೀವನ ಪರ್ಯಂತ ಜೈಲಿನಲ್ಲಿ ಕಾಲ ಕಳೆಯುವುದು ಎಂದುಕೊಂಡಿದ್ದ ಬಂಧಿಗಳಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಮತ್ತೆ ಅವರ ಬಾಳಿಗೆ ಪುನರ್ಜನ್ಮ ನೀಡಿದಂತಾಗಿದೆ.

ಈ ಬಗ್ಗೆ ಬಿಡುಗಡೆಗೊಂಡ ಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಬಿಡುಗಡೆಯಾದ ಬಂಧಿಯೊಬ್ಬರು ಮಾತನಾಡಿ ನಾವು ಒಂದು ಕ್ಷಣ ಮೈ ಮರೆತು ಕೋಪದ ಕೈಗೆ ಬುದ್ಧಿ ಕೊಟ್ಟಿದ್ದರಿಂದ ಇಷ್ಟು ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಪರಿವರ್ತನೆ ಹೊಂದಿದ್ದೇವೆ. ನಮ್ಮ ದಶಾವತಾರದ ಜೀವನದಲ್ಲಿ 9 ಅವತಾರಗಳನ್ನು ಜೈಲಿನಲ್ಲೇ ಕಳೆದಿದ್ದು ಇನ್ನೊಂದು ಅವತಾರವನ್ನು ಇನ್ನು ಒಳ್ಳೆ ರೀತಿಯಲ್ಲಿ ಕಳೆಯುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *