ಹೊಸ ವರ್ಷ, ಹೊಸ ದಿನ- ದೇವರ ಮೊರೆ ಹೋದ ರಾಜ್ಯದ ಜನ

Public TV
1 Min Read

ಬೆಂಗಳೂರು: ಹೊಸ ವರ್ಷದಂದು ರಾಜ್ಯದ ಜನತೆ ದೇವರ ಮೊರೆ ಹೋಗಿದ್ದಾರೆ. ವರ್ಷದ ಮೊದಲ ದಿನದಂದು ಎಲ್ಲಾ ದೇಗುಗಳಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ.

ಬೆಂಗಳೂರಿನ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಬೆಂಗಳೂರಿನ ಶಕ್ತಿ ದೇವತೆ ಅಣ್ಣಮ್ಮ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತಿದೆ. ಈ ವರ್ಷ ಒಳ್ಳೆಯದಾಗಲಿ ಅಂತಾ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇದನ್ನೂ ಓದಿ: ಇಸ್ರೋ 2024ರ ಮೊದಲ ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇಗುಲದಲ್ಲೂ ಜನಸಾಗರ ಇದೆ. ಮಧ್ಯಾಹ್ನ 1 ಗಂಟೆಗೆ ಕ್ಲೋಸ್ ಆಗುತ್ತಿದ್ದ ದೇಗುಲ ಇಂದು 2:30ರವರೆಗೆ ಇರಲಿದೆ. ಭಕ್ತರ ಸಂಖ್ಯೆ ಹೆಚ್ಚಳವಾಗಿದ್ರಿಂದ ದೇಗುಲದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ ನೆರೆದಿದ್ದು, ಬೆಳ್ಳಂಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಜನ ನಿಂತಿದ್ದಾರೆ.

ಚಾಮರಾಜನಗರದ ಮಹದೇಶ್ವರನ ಸನ್ನಿಧಿಗೆ ಕೂಡ ಭಕ್ತ ಸಾಗರ ಹರಿದು ಬಂದಿದೆ. ಮಾದಪ್ಪನ ಸನ್ನಿಧಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಚಿನ್ನದ ತೇರು, ಬೆಳ್ಳಿ ರಥ, ಬಸವ ವಾಹನ, ಹುಲಿವಾಹನ ಸೇವೆಗಳು ನಡೆಯುತ್ತಿವೆ. ಕೋಲಾರದ ಕೋಟಿಲಿಂಗ ಕ್ಷೇತ್ರದಲ್ಲಿಯೂ ಭಕ್ತಗಣ ಸೇರಿದೆ. ಕೆಜಿಎಫ್ ತಾಲೂಕಿನ ಕಮ್ಮಸಂದ್ರದಲ್ಲಿರುವ ಕೋಟಿಲಿಂಗ ದೇಗುಲದಲ್ಲಿ ಸಾವಿರಾರು ಜನ ಶಿವನ ದರ್ಶನ ಪಡೆಯುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭಕ್ತರ ದಂಡು ನೆರೆದಿದೆ. ಮೇಲುಕೋಟೆ ಚೆಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣ ನಿಮಿಷಾಂಭ, ರಂಗನಾಥ ದೇವಸ್ಥಾನ ಹೀಗೆ ಪ್ರಮುಖ ದೇವಸ್ಥಾನಗಳಿಗೆ ಸಾಕಷ್ಟಯ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

Share This Article