ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ

Public TV
2 Min Read

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಮೂರು ದಿನಗಳ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆಗೆ ಇವತ್ತು ಅಧಿಕೃತವಾಗಿ ತೆರೆ ಬೀಳಲಿದೆ.

ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ಮೂರು ದಿನಗಳ ಕನ್ನಡ ಅಕ್ಷರ ಜಾತ್ರೆ ನಡೆದಿದ್ದು, ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ವಿದ್ಯಾಕಾಶಿ ಧಾರವಾಡದಲ್ಲಿ ನಡೆಯಲಿದ್ದು, ಇಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ.

 

ಸುಮಾರು 11 ಸಾವಿರ ಪ್ರತಿನಿಧಿಗಳು ಸಮ್ಮೇಳನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅವರಿಗಾಗಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು 200 ಕೌಂಟರ್ ತೆರೆಯಲಾಗಿದ್ದು, ಊಟಕ್ಕಾಗಿ 2,75 ಕೋಟಿ ರೂ. ವೆಚ್ಚ ಮಾಡಲಾಗಿತ್ತು.

ಆದರೆ ಕನ್ನಡದ ಕಂಪು ಬೀರಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನ, ಆರಂಭದಲ್ಲೇ ರಾಜಕೀಯ ಮತ್ತು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಗದ್ದಲವನ್ನು ಸೃಷ್ಟಿಸಿದೆ. ಸಮ್ಮೇಳನಾಧ್ಯಕ್ಷ ಸಾಹಿತಿ ಚಂದ್ರಶೇಖರ ಪಾಟೀಲ ಮೋದಿ ಬಗ್ಗೆ ಟೀಕೆ ಮಾಡುತ್ತಾ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಹೊಗಳುವ ಮೂಲಕ ಕನ್ನಡ ಹಬ್ಬದಲ್ಲಿ ರಾಜಕೀಯವನ್ನು ಬೆರಸಿದರು.

ಸಚಿವ ತನ್ವೀರ್ ಸೇಠ್‍ಗೆ ಕನ್ನಡ ಪ್ರೇಮವಿಲ್ಲ, ಸಚಿವ ಸ್ಥಾನದಿಂದ ಕೈ ಬಿಟ್ಟು ಕನ್ನಡ ಪ್ರೇಮ ಇರುವವರನ್ನು ಸಚಿವರನ್ನಾಗಿ ನೇಮಿಸಿ ಅಂತಾ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಪ್ರಗತಿಪರ ಚಿಂತಕ ಭಗವಾನ್ ರಾಮನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಮ ದೇವರಲ್ಲ, ಆತ ಜಾತಿವಾದಿ, ಕೊಲೆಗಡುಕ, ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಯಾರು ಹೋಗಬೇಡಿ ದಡ್ಡರಾಗುತ್ತೀರಾ ಎನ್ನುವ ಮೂಲಕ ಕೆಲವರ ಧಾರ್ಮಿಕ ಭಾವನೆಯನ್ನು ಕದಡಿದರು. ಅಂತಿಮ ದಿನವಾದ ಇವತ್ತು ಸಮ್ಮೇಳನದ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ.

ಮೈಸೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಧಿಕಾರವಧಿಯ ದಿನಗಳನ್ನು ನೆನೆದರು. ನಾನು ಪ್ರಧಾನಿಯಾಗಿದ್ದು, ಒಂದು ಘಟನೆ. ನಮ್ಮ ಸರ್ಕಾರವನ್ನು 5 ವರ್ಷ ಆಡಳಿತ ಮಾಡಲು ಬಿಡಲ್ಲ ಎಂದು ವಿರೋಧ ಪಕ್ಷದವರು ಶಪಥ ತೊಟ್ಟಿದ್ದರು. ನಾನು 5 ವರ್ಷವಾಗಲಿ, 5 ದಿನವಾಗಲೀ ಜನರ ಋಣ ತೀರಿಸುತ್ತೇನೆ ಎಂದಿದ್ದೆ. ಅಂತೆಯೇ ನಾನು ಪ್ರಧಾನಿ ಆಗಿದ್ದ ವೇಳೆ ಜನರ ಋಣ ತೀರಿಸುವಂತೆ ಮಾತಾಡಿದ್ದೇನೆ ಎಂದರು.

 

Share This Article
Leave a Comment

Leave a Reply

Your email address will not be published. Required fields are marked *