-ಒಂದೇ ದಿನ 3 ಜೋಡಿಗಳನ್ನ ಒಂದು ಮಾಡಿದ ನ್ಯಾಯಾಧೀಶರು
-ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ ಮತ್ತೆ ಒಂದಾದ ಜೋಡಿಗಳು
ಚಿಕ್ಕಬಳ್ಳಾಪುರ: ನೂರಾರು ಮಂದಿ ಎದುರು ಶಾಸ್ತ್ರೋಕ್ತವಾಗಿ ಮದುವೆಯಾಗಿ ಸತಿ ಪತಿಗಳಾಗಿ ಸಹ ಜೀವನ ನಡೆಸುತ್ತಿರುತ್ತಾರೆ. ಆದರೆ ಅವರ ಜೀವನದಲ್ಲಾದ ಕೆಲ ಘಟನೆಗಳಿಂದ ನಾನೊಂದು ತೀರ, ನೀನೊಂದು ತೀರ ಅಂತ ಬೇರೆ, ಬೇರೆಯಾಗಿ ಎಷ್ಟೋ ಮಂದಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಆದರೆ ನ್ಯಾಯಾಧೀಶರು ವಿಚ್ಛೇದನ ನೀಡದೇ ಬುದ್ಧಿ ಮಾತುಗಳನ್ನು ಹೇಳಿ ಮತ್ತೆ ಸತಿ ಪತಿಗಳಿಬ್ಬರು ಸಹಬಾಳ್ವೆಯ ಜೀವನ ನಡೆಸುವಂತೆ ದೂರಾವಾಗಿದ್ದ ಜೋಡಿಗಳನ್ನು ಒಂದು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಎಂಬಿಎ ಪದವೀಧರೆ ಉಷಾ.ಜಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದೇವರಕೊಂಡಹಳ್ಳಿ ಗ್ರಾಮದ ನಿವಾಸಿ ಬಿ.ಕಾಂ ಪದವೀಧರ ಮುನಿರಾಜು ಜೋಡಿ, ಎರಡು ವರ್ಷಗಳ ಹಿಂದೆ ಸಾವಿರಾರು ಜನರ ಮುಂದೆ ಅದ್ದೂರಿ ಮಂಟಪದಲ್ಲಿ ಸಪ್ತಪದಿ ತುಳಿದಿದ್ದರು. ಆದರೆ ಇಬ್ಬರ ಮಧ್ಯೆ ಉಂಟಾದ ವೈಮನಸ್ಸು, ಇಗೋ, ಇವರ ಬದುಕಿನಲ್ಲಿ ನೆಮ್ಮದಿಯನ್ನು ಹಾಳು ಮಾಡಿತ್ತು. ಸುಖ ಸಂಸಾರ ಮಾಡುತ್ತಿದ್ದ ಇವರು ಪರಸ್ಪರ ನೀನಾ ನಾನಾ ಅಂತ ಇಗೋದಿಂದ ಒಬ್ಬರಿಗೊಬ್ಬರು ದೂರವಾಗಿದ್ದರು. ಉಷಾ ಗಂಡ ಬೇಡವೇ ಬೇಡ ಒಬ್ಬಂಟಿ ಜೀವನ ಸಾಗಿಸುತ್ತೇನೆ. ನಾನೇನು ಕಡಿಮೆ ಇಲ್ಲ. ನಾನು ಎಂಬಿಎ ಪದವಿಧರೆ ಅಂತ ಬೀಗಿ ಗಂಡನಿಂದ ದೂರವಿದ್ದಳು. ಆದರೆ ಮುನಿರಾಜು, ಪತ್ನಿಯ ಜೊತೆ ಸೇರಲು ಚಿಕ್ಕಬಳ್ಳಾಪುರ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ಇಂದು ನಡೆದ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರಾದ ವಿವೇಕಾನಂದ ಪಂಡಿತ್ ಹಾಗೂ ನ್ಯಾಯಧೀಶ ಲಕ್ಷ್ಮಿಕಾಂತ್ ಮಿಷ್ಕಿನ್, ಜೋಡಿಗೆ ಬುದ್ದಿ ಹೇಳಿ ಮತ್ತೆ ಒಂದುಗೂಡಿಸಿದ್ದಾರೆ.
ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದೇವಗಾನಹಳ್ಳಿ ನಿವಾಸಿ ರಮೇಶ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ನಿವಾಸಿ ದೀಪಾ, ಮದುವೆಯಾಗಿ ಬರೋಬ್ಬರಿ 18 ವರ್ಷಗಳು ಆಗಿವೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದ ಕಾರಣ, ಪತ್ನಿ ಡೈವೊರ್ಸ್ಗೆ ನ್ಯಾಯಲಯದ ಮೊರೆ ಹೋಗಿದ್ದಳು. ಈ ಜೋಡಿಗೂ ನ್ಯಾಯಾಧೀಶರುಗಳು ಬುದ್ದಿ ಹೇಳಿ, ಸಹಬಾಳ್ವೆಗೆ ಸೂಚಿಸಿದರು. ಇದರಿಂದ ಮತ್ತೆ ಜೋಡಿ ಸಹಜೀವನಕ್ಕೆ ಒಪ್ಪಿಕೊಂಡರು. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ
ಮತ್ತೊಂದೆಡೆ ಜಿಲ್ಲೆಯ ಗುಡಿಬಂಡೆಯ ಆಶಾ ಹಾಗೂ ವಿನೋದ್ ಕುಮಾರ್ ದಂಪತಿ, ಇನ್ನೂ ಇಬ್ಬರು ಒಬ್ಬರಿಗೊಬ್ಬರು ಸುಖ ಸಂಸಾರ ಸಾಗಿಸಲು ಸಾಧ್ಯವೇ ಇಲ್ಲ ಅಂತ ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಧೀಶೆ ಶ್ರೀಮತಿ ಅರುಣಾಕುಮಾರಿ, ಇಬ್ಬರ ಮನವೊಲಿಸಿ ನ್ಯಾಯಾಲಯದಲ್ಲಿಯೇ, ಇಬ್ಬರನ್ನು ಮತ್ತೆ ಒಂದು ಮಾಡಿದರು. ಒಟ್ಟಿನಲ್ಲಿ ಸುಖ ಜೀವನದ ಕನಸ್ಸು ಕಂಡು, ಸಾವಿರಾರು ಜನರ ಸಮ್ಮುಖದಲ್ಲೆ ಸಪ್ತಪದಿ ತುಳಿದು ಕೊನೆಗೆ ಸಂಸಾರದ ಸಹವಾಸವೇ ಬೇಡ ಎಂದುಕೊಂಡಿದ್ದ ಮೂರು ಜೋಡಿಗಳು, ಈಗ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳ ಪ್ರಯತ್ನದಿಂದ ಒಬ್ಬರಿಗೊಬ್ಬರು ಮತ್ತೆ ಒಂದಾಗಿ ಇತರರಿಗೂ ಮಾದರಿಯಾಗಿದ್ದಾರೆ.