ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

Public TV
4 Min Read

ಮಂಗಳೂರು: ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಮಟ್ಟದ ಕೃಷಿ ಸಮ್ಮೇಳನ ಮಂಗಳೂರಿನ ಮುಲ್ಕಿ ಸಂಜೆ ಶ್ರೀರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಕೃಷಿ ಸಿರಿ-2022 ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮವನ್ನು ತುಳಸಿ ಗಿಡಕ್ಕೆ ನೀರೆರೆದು ತುಳುನಾಡಿನ ಸಾಂಪ್ರದಾಯಿಕ ಬಲಿಂದ್ರ ಕಂಬಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಇದನ್ನೂ ಓದಿ: ತಂತ್ರಜ್ಞಾನ ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ: ಮೋದಿ

ಕೃಷಿ ಮೇಳ ಉದ್ಘಾಟಿಸಿ ಮಾತಾಡಿದ ಶೋಭಾ ಕರಂದ್ಲಾಜೆ, ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಕೃಷಿಗೆ ಹೆಸರುವಾಸಿಯಾಗಿತ್ತು. ನಮ್ಮ ಆಹಾರ, ತರಕಾರಿಯನ್ನು ನಾವೇ ಉತ್ಪಾದನೆ ಮಾಡುತ್ತಿದ್ದೆವು. ಆದರೆ ಈಗ ತಿರುಗಿ ನೋಡಿದರೆ ನಾವು ಒಂದು ಹಿಡಿ ಭತ್ತಕ್ಕಾಗಿ ಬೇರೆ ಜಿಲ್ಲೆಯನ್ನು ಅವಲಂಬನೆ ಮಾಡಿದರೆ ತರಕಾರಿಗಾಗಿ ಘಟ್ಟವನ್ನು ಆಶ್ರಯಿಸಿದ್ದೇವೆ. ನಮ್ಮ ಭತ್ತದ ಗದ್ದೆಯನ್ನು ಹಡಿಲು ಬಿಟ್ಟು ಕೃಷಿ ಲಾಭವಿಲ್ಲ ಎಂದು ಬೇರೆ ಉದ್ಯೋಗವನ್ನು ಅರಸಿಕೊಂಡೆವು. ಕಳೆದ ಎರಡು ವರ್ಷಗಳ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಊರಿಗೆ ವಾಪಾಸ್ ಆದ ಅನೇಕ ಕೃಷಿಕರು ಮತ್ತೆ ಹಡಿಲು ಗದ್ದೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡೆವು. ಇದು ಖುಷಿಯ ವಿಚಾರ. ಯುವಕರು ಮತ್ತೆ ಕೃಷಿಯತ್ತ ನೋಡುತ್ತಿರುವ ಈ ವೇಳೆಯಲ್ಲಿ ಯುವಕರಲ್ಲಿ ಕೃಷಿ ಮೇಳದಂತಹ ಕಲ್ಪನೆ ಹುಟ್ಟುವ ಮೂಲಕ ಇಂದಿಲ್ಲಿ ಸಾಕಾರಗೊಳ್ಳುತ್ತಿದೆ ಎಂದರು. ಇದನ್ನೂ ಓದಿ: ಅಷ್ಟು ದೂರದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರೂ ಸರ್ಕಾರ ಏನೂ ಮಾಡಿಲ್ಲ ಅಂತಿದ್ದಾರೆ: ಸೂರ್ಯ ಅಸಮಾಧಾನ

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ರೈತರು ಸ್ವಾವಲಂಬಿಯಾಗಬೇಕು. ರೈತವರ್ಗ ಮತ್ತೆ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿಲ್ಲ. ಇದಕ್ಕಾಗಿ ಬೀಜ ಮತ್ತು ಗೊಬ್ಬರ ಖರೀದಿಗೆಂದು ವಾರ್ಷಿಕ 6 ಸಾವಿರ ರೂ. ಅನ್ನು ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಪಾಲಿ ಹೌಸ್, ಗ್ರೀನ್ ಹೌಸ್ ಫಾರ್ಮಿಂಗ್ ಮೂಲಕ ಕಡಿಮೆ ಕೀಟನಾಶಕ ಬಳಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಸಾವಯವ ಕೃಷಿಗೆ ಇಂದು ಪ್ರಪಂಚದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತಿತರ ಸಣ್ಣಪುಟ್ಟ ರಾಜ್ಯಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವವಿದ್ದು ಅಲ್ಲಿನ ರೈತರ ಬೆಳೆಗಳನ್ನು ಖರೀದಿ ಮಾಡಲು ಅಮೆರಿಕ ಮತ್ತಿತರ ದೇಶಗಳಿಂದ ಕಂಪೆನಿಗಳು ಬರುತ್ತವೆ. ಇಂತಹ ಲಾಭದಾಯಕ ಕೃಷಿ ಕುರಿತು ನಾವಿಂದು ಚಿಂತಿಸಬೇಕಿದೆ ಎಂದು ಮಾಹಿತಿ ಹಂಚಿಕೊಂಡರು.

ಈ ಹಿಂದೆ 2013-14ರಲ್ಲಿ ದೇಶದಲ್ಲಿ 70% ಜನ ಕೃಷಿ ಆಧರಿಸಿದ್ದರೂ ಅಂದಿನ ಸರ್ಕಾರ ಬಜೆಟ್‍ನಲ್ಲಿ ಕೃಷಿಗಾಗಿ ಇಟ್ಟಿದ್ದು 23,000 ಕೋಟಿ ರೂ. ಮಾತ್ರ. ಈ ವರ್ಷ ಬಜೆಟ್‍ನಲ್ಲಿ ಕೃಷಿಗಾಗಿ 1.33 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಐಟಿ ಕಲಿತವರಿಗೆ ಕೃಷಿ ಮಾಡಿ ಎಂದರೆ ಮಾಡಲ್ಲ ಅದರ ಬದಲು ಕೃಷಿ ಎಕ್ಸ್‌ಪೋರ್ಟ್‌ ಕೃಷಿ ಮಾರ್ಕೆಟ್, ಕೃಷಿ ಬ್ಯುಸಿನೆಸ್, ಫುಡ್ ಪ್ರೋಸೆಸಿಂಗ್ ಇತ್ಯಾದಿ ಮಾಡಲು ಪ್ರೆರೇಪಿಸಿ. ಯುವಜನತೆ ಇಂತಹ ಉದ್ಯಮಗಳಲ್ಲಿ ತೊಡಗಿಕೊಂಡರೆ ದೇಶದ ಕೃಷಿ ಸ್ವಾವಲಂಬಿಯಾಗಲು ಸಾಧ್ಯವಿದೆ. ಕೊರೊನಾದಿಂದಾಗಿ ಇಂದು ದೇಶದ ಕೃಷಿ ಎಕ್ಸ್‌ಪೋರ್ಟ್‌ನಲ್ಲಿ 9 ನೇ ಸ್ಥಾನದಲ್ಲಿದೆ. ನಾವು ಈ ಎಲ್ಲವನ್ನೂ ಪ್ರೇರೇಪಣೆಯಾಗಿ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಕೃಷಿಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದಿರೋದು ಮೋದಿ ಮಗ, ನನ್ನ ಮಗನಲ್ಲ: ವಿದ್ಯಾರ್ಥಿ ತಂದೆ ಕಣ್ಣೀರು

ಬಳಿಕ ಮಾತಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳೆಪಾಡಿ ಗುತ್ತು, ದೇಶದಲ್ಲಿ 65-70 ಶೇ. ಜನರು ಇಂದಿಗೂ ಕೃಷಿಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ಉದ್ಯಮಗಳು ನಿಂತರೂ ಕೃಷಿಕ ಮಾತ್ರ ತನ್ನ ಕೃಷಿಭೂಮಿಯಲ್ಲಿ ನಿರಂತರ ದುಡಿದು ನಮ್ಮ ಹಸಿವನ್ನು ನೀಗಿಸಿದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಒಂದೆರಡು ಎಕರೆ ಮಾತ್ರ ಕೃಷಿಭೂಮಿ ಹೊಂದಿದ್ದಾರೆ. ಇಸ್ರೇಲ್ ನಂತಹ ಪುಟ್ಟ ರಾಷ್ಟ್ರ ಇಂದು ಕೃಷಿಯಲ್ಲಿ ಪ್ರಗತಿ ಸಾಧಿಸಿದ್ದರೆ ನಮಗೆ ಏಕೆ ಸಾಧ್ಯವಾಗುವುದಿಲ್ಲ. ಕೃಷಿ ಯಾವತ್ತೂ ನಷ್ಟದ ಉದ್ಯಮವಲ್ಲ. ಆದರೆ ನಮಗಿರುವ ಸಣ್ಣ ಕೃಷಿ ಭೂಮಿಯೇ ನಮ್ಮ ಸಮಸ್ಯೆಯಾಗಿದೆ. ಆದರೆ ನಾವು ಎರಡು ತಿಂಗಳು ಕೆಲಸ ಮಾಡಿದರೆ ವರ್ಷದ 12 ತಿಂಗಳು ಊಟ ಮಾಡುತ್ತೇವೆ. ಇದು ಕೃಷಿ ಕ್ಷೇತ್ರದ ಸಾಧನೆ ಎಂದರು.

ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಬೂಬಕರ್ ಸಿದ್ದಿಕ್ ಹೈನುಗಾರಿಕೆ, ರಘುರಾಮ ಕುಲಾಲ್ ಗುಡಿಕೈಗಾರಿಕೆ, ವಿಶ್ವೇಶ್ವರ ಸಜ್ಜನ ಬಳ್ಳಾರಿ, ನಿತ್ಯಾನಂದ ಕರ್ಕೇರ ಉಡುಪಿ ಮೀನು ಕೃಷಿ, ಶ್ರೀನಿವಾಸ್ ಗಾಣಿಗ ಅವರನ್ನು ಅತಿಥಿಗಳು ಶಾಲು ಹೊದಿಸಿ ಪೇಟಾ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕೃಷಿ ಇಲಾಖೆಯ ಎಸ್‍ಎಂಎಎಂ ಯೋಜನೆಯ 8 ಲಕ್ಷ ಸಹಾಯ ಧನದಿಂದ ವಿನಯ ಕೃಷಿ ಬೆಳೆಗಾರರ ಸಂಘಕ್ಕೆ ಟ್ರ್ಯಾಕ್ಟರ್ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ್ ಕೋಟ್ಯಾನ್, ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಉಳೆಪಾಡಿಗುತ್ತು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರು ಇದರ ಉಪಕುಲಪತಿ ಪಿ. ರಮಣ್ ಐತಾಳ್, ಕೃಷಿ ಸಿರಿ ಸಂಚಾಲಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಪಟ್ಲ ಫೌಂಡೇಶನ್ ಇದರ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ, ಉದ್ಯಮಿ ಮನೋಹರ್ ಶೆಟ್ಟಿ, ಕೃಷಿ ಸಿರಿ ಸಂಚಾಲಕ ಕೃಷ್ಣ ಶೆಟ್ಟಿ ತಾರೆಮಾರ್, ಕೃಷಿ ಸಿರಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಮೇಳ ಆಯೋಜನೆಯ ಹಿನ್ನೆಲೆ, ರೂಪುರೇಷೆ ಕುರಿತು ಕೃಷಿ ಸಿರಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪ್ರಸ್ತಾವಿಕ ಮಾತನ್ನಾಡಿದರು. ಕೃಷಿ ಸಿರಿ ಸಂಚಾಲಕ ಪ್ರಶಾಂತ್ ಪೈ ಅತಿಥಿಗಳನ್ನು ಸ್ವಾಗತಿಸಿದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *