ಕ್ರೂರ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ – ದಿನೇಶ್ ಗುಂಡೂರಾವ್

Public TV
1 Min Read

ಬೆಂಗಳೂರು: ಇಂಥಹ ಕ್ರೂರ ಕೇಂದ್ರ ಸರ್ಕಾರವನ್ನು ಎಂದೂ ನೋಡಿಲ್ಲ. ನೆರೆ ಪ್ರವಾಹದಿಂದ ಇಷ್ಟರ ಮಟ್ಟಿಗೆ ಹಾನಿಯಗಿದೆ. ಆದರೂ ಪರಿಹಾರ ಬಿಡುಗಡೆ ಮಾಡಿಲ್ಲ, ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ, ನಿರ್ಮಲ ಸೀತಾರಾಮ್ ಇಬ್ಬರೂ ಬಂದು ಹೋದರು. ಈವರೆಗೆ ಏನೂ ಮಾತಾಡಿಲ್ಲ. ಯಡಿಯೂರಪ್ಪನವರು ಕೂಡ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರ ಕೊಡುತ್ತಿರುವ 10 ಸಾವಿರ ರೂ. ತುರ್ತು ಪರಿಹಾರ ಶೇ.20 ರಷ್ಟು ಜನರಿಗೆ ಮಾತ್ರ ತಲುಪಿದೆ. ಮುಖ್ಯಮಂತ್ರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಹೀಗಾಗಿ ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಅನಿವಾರ್ಯತೆ ನಿರ್ಮಾಣ ಆಗಿದೆ. ಇದೇ ತಿಂಗಳ 24ರಂದು ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಂತರ ಮುಂದಿನ ನೆರೆ ಪೀಡಿತ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ವರೆಗೆ ವಿರೋಧ ಪಕ್ಷದವರನ್ನು ಕರೆದು ಸಿಎಂ ಮಾತು ಕತೆ ನಡೆಸಿಲ್ಲ. ಈ ಕುರಿತು ವಿರೋಧ ಪಕ್ಷದವರನ್ನು ಕರೆದು ಚರ್ಚೆ ಮಾಡಲಿ ನಾವು ಬರುತ್ತೇವೆ. ಜನರ ಸಮಸ್ಯೆ ಪರಿಹಾರ ಆಗಬೇಕಿದೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್‍ನವರಿಗೆ ಕೆಲಸ ಇಲ್ಲ ಹೀಗಾಗಿ ವಿರೋಧಿಸುತ್ತಾರೆ ಎಂಬ ಸಿಎಂ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಪರವಾಗಿ ಪ್ರತಿಭಟನೆ ಮಾಡುವುದು ತಪ್ಪೇ? ನಾವು ಕೂಡ ಜನ ಪ್ರತಿನಿಧಿಗಳು ಜನರಿಗಾಗಿ ಹೋರಾಟ ಮಾಡೋದು ತಪ್ಪಾ, ಯಾವ ಅರ್ಥದಲ್ಲಿ ನಮಗೆ ಕೆಲಸ ಇಲ್ಲ ಎಂದು ಸಿಎಂ ಹೇಳುತ್ತಾರೆ. ಜನರ ಸಮಸ್ಯೆಗೆ ಪರಿಹಾರ ಸಿಗದೇ ಇದ್ದರೆ ನಾವು ದೆಹಲಿವರೆಗೂ ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *