ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

Public TV
2 Min Read

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಇಂದು ರಣಕಹಳೆಯನ್ನು ಮೊಳಗಿಸಿದೆ. ಈ ಬಾರಿಯ ಚುನಾವಣೆಗೆ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇಂದು ಜೆಡಿಎಸ್ ನಗರದ ಯಲಹಂಕದ ಮೈದಾನದಲ್ಲಿ ವಿಕಾಸ ಪರ್ವವನ್ನು ಹಮ್ಮಿಕೊಂಡಿದ್ದು, ಬಿಎಸ್‍ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಹ ಭಾಗಿಯಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಮುಖವನ್ನು ಹೊಂದಿರುವ ಪಕ್ಷಗಳಾಗಿವೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಕಲಿಸಬೇಕಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿತ್ತು. ಆದ್ರೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ತನ್ನ ಮಾತನ್ನು ಮರೆತು ಮೋಸ ಮಾಡಿತು. ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಲಕ್ಷ ದಲಿತರ ವೋಟ್‍ಗಳನ್ನ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಆದ್ರೆ ಕಾಂಗ್ರಸ್ ಇಲ್ಲಿವರೆಗೆ ದಲಿತರಿಗೆ ಸರಿಯಾದ ಸೌಲಭ್ಯಗಳನ್ನು ನೀಡದೇ ಕಡೆಗಣನೆ ಮಾಡಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಆದರ್ಶವಾಗಿ ಕಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲಾಗಿತ್ತು. ಭಾರತರತ್ನ ಕೊಡುವಲ್ಲಿ ಅಂದಿನ ಕೇಂದ್ರ ಸರ್ಕಾರ ನೀಡಲು ಅಲ್ಲಗೆಳದಿತ್ತು ಎಂದು ಕಾಂಗ್ರೆಸ್ ವಿರುದ್ಧ ಮಾಯಾವತಿ ಕಿಡಿಕಾರಿದ್ರು.

ಆರ್‍ಎಸ್‍ಎಸ್ ಕೈಯಲ್ಲಿ ಬಿಜೆಪಿ: ಆರ್‍ಎಸ್‍ಎಸ್ ಮುಷ್ಟಿಯಲ್ಲಿ ಬಿಜೆಪಿ ಇದೆ. ಬಿಜೆಪಿ ಸಹ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಯುವಕರು ಉದ್ಯೋಗ ನೀಡಿ ಅಂತಾ ಕೇಳಿದ್ರೆ ಪ್ರಧಾನಿ ಮೋದಿ ಪಕೋಡಾ ಮಾರಿ ಅಂತಾ ಸಲಹೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಕಪ್ಪು ಹಣ ತರುತ್ತೇವೆ ಅಂತಾ ಹೇಳಿದವರು ಇದೂವರೆಗೂ ಒಂದು ರೂಪಾಯಿಯನ್ನು ಸಹ ತಂದಿಲ್ಲ. ಇನ್ನು ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನಾನುಕೂಲಕರವಾಗಿವೆ. ಬಿಜೆಪಿ ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯಲ್ಲಿ ಧರ್ಮ ಸಂಘರ್ಷದ ಮೂಲಕ ಚುನಾವಣೆ ಗೆಲ್ಲಲ್ಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕರ್ನಾಟಕದ ಜನರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಗೆ ತಮ್ಮ ಮತವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಮುಂದಿನ ಚುನಾವಣೆಯ ಬಳಿಕೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ರೈತರು, ದಲಿತರು ಬಡವರ ಮೇಲೆ ಪ್ರೀತಿ ವಿಶ್ವಾಸ ಇಲ್ಲ. ಇಂದು ಜೆಡಿಎಸ್ ಜೊತೆ ಬಿಎಸ್ಪಿ ಹೊಂದಾಣಿಕೆ ಮಾಡಿಕೊಂಡಿದೆ. ಲಕ್ಷಾಂತರ ಜನ ಇವತ್ತು ಆಗಮಿಸಿದ್ದೀರಿ ನಿಮ್ಮನ್ನೆಲ್ಲ ನೋಡಿದ್ದು ನನಗೆ ಖುಷಿ ನೀಡಿದೆ. ಕನ್ನಡ ನಾಡಿನ ಜನತೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ, ದಲಿತರು, ರೈತರು, ಹಿಂದುಳಿದ ವರ್ಗದ ಹಿತಕ್ಕಾಗಿ ಜೆಡಿಎಸ್ ಗೆಲ್ಲಿಸಿ ಬೇಕಿದೆ ಎಂದು ಮನವಿ ಮಾಡಿಕೊಂಡರು.

ಸಮಾರಂಭದ ವೇದಿಕೆಯಲ್ಲಿ ಮಯಾವತಿ ಅವರಿಗಾಗಿಯೇ ಬಿಎಸ್‍ಪಿ ಚಿಹ್ನೆಯುಳ್ಳ ಭಾಷಣದ ಟೇಬಲ್ ಸಿದ್ಧತೆ ಮಾಡಲಾಗಿತ್ತು. ಇತ್ತ ಜೆಡಿಎಸ್ ನಾಯಕರು ಮಾತನಾಡಲು ಪ್ರತ್ಯೇಕ ಭಾಷಣದ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *