ಅಂಬೇಡ್ಕರ್ ಭವನದ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣ!

Public TV
2 Min Read

– ಭ್ರಷ್ಟರ ಹಣದಾಹಕ್ಕೆ ಆಹುತಿಯಾಯ್ತಾ 18 ಕೋಟಿ ಕಾಮಗಾರಿ

ಬೆಂಗಳೂರು: ಭವ್ಯವಾದ ಅಂಬೇಡ್ಕರ್ ಭವನವಾಗಬೇಕಿದ್ದ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಶಂಕುಸ್ಥಾಪನೆಯಾಗಿ 9 ವರ್ಷ ಕಳೆದಿದೆ. ಕೋಟಿ ಕೋಟಿ ದುಡ್ಡು ಭ್ರಷ್ಟರ ಪಾಲಾಗಿದೆ. ಅಲ್ಲಿ ಹೇಳೋರು ಇಲ್ಲ. ಕೇಳೋರು ಇಲ್ಲ. ಈಗಾಗಲೇ ಅಲ್ಲಿ ನಾಲ್ಕೈದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಆ ಕಾಮಗಾರಿ ಬಗ್ಗೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಹೌದು. ಸುಮಾರು ಎರಡು ಎಕರೆ ಜಾಗದಲ್ಲಿ ಅಂಬೇಡ್ಕರ್ ಭವನ ಕಟ್ಟೋಕೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಆಗಿನ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಅದಾಗಿ ಕೋಟಿ ಕೋಟಿ ಖರ್ಚು ಎಂದು ಹೇಳಿದ್ದು ಬಿಟ್ಟರೆ ಕಾಮಗಾರಿ ನಡಿಯಲೇ ಇಲ್ಲ. ಕಾಮಗಾರಿ ನಿಲ್ಲಿಸಿ 9 ವರ್ಷವಾದರೂ ಮತ್ತೆ ಶುರು ಮಾಡುವ ಮನಸ್ಸು ಕೂಡ ಯಾರೂ ಮಾಡಿಲ್ಲ.

2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಾರ್ವಜನಿಕರ ಅನುಕೂಲಕ್ಕೆಂದು ಎರಡು ಎಕರೆ ಸರ್ಕಾರಿ ಜಮೀನಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರಲ್ಲಿ ಭವನ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಶಂಕುಸ್ಥಾಪನೆಯಾಗಿ ಬರೋಬ್ಬರಿ ಒಂಬತ್ತು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಕೆಆರ್ ಪುರ ವಿಧಾನಸಭಾ ಕ್ಷೇತ್ರದ ದೇವಸಂದ್ರ ವಾರ್ಡ್ ನ ಮಹದೇವಪುರ ಗ್ರಾಮದಲ್ಲಿ ಅಂದಿನ ಸರ್ಕಾರ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಆದರೆ ಕಾಮಗಾರಿ ಪ್ರಾರಂಭವಾಗಿ ಕೆಲವೇ ತಿಂಗಳಲ್ಲಿ ಅರ್ಧಕ್ಕೆ ನಿಂತುಹೋಗಿ, ಈಗ ಮಳೆ ನೀರು ತುಂಬಿ, ಸುತ್ತಮುತ್ತಲಿನ ಕಸ ತುಂಬಿ ಹಾಳು ಕೊಂಪೆಯಾಗಿಸಿದ್ದಾರೆ. ಕಾಮಗಾರಿಗೆ ಎಂದು ಹಾಕಿದ್ದ ಎರಡೂವರೆ ಟನ್ ಕಬ್ಬಿಣ ಕಳ್ಳತನ ಬೇರೆ ಆಗಿದೆ. ಆದರೆ ಆ ಬಗ್ಗೆಯೂ ಯಾವುದೇ ತನಿಖೆಯಾಗಿಲ್ಲ. ಸಿಕ್ಕಸಿಕ್ಕವರು ಈ ಭವನದ ದುಡ್ಡ ಹಂಚಿ ತಿಂದಿದ್ದಾರೆ ಅನ್ನೋದು ಸ್ಥಳೀಯರ ಆರೋಪವಾಗಿದೆ.

ಈ ಪಾಳು ಭವನ ಈಗ ಅಕ್ಷರಶಃ ಅನೈತಿಕತೆಯ ತಾಣವಾಗಿದೆ. ಇಲ್ಲಿ ಹಗಲು ರಾತ್ರಿ ಎನ್ನದೆ ಅನೈತಿಕ ಚಟುವಟಿಕೆಗಳು ಅಂಬೇಡ್ಕರ್ ಭವನದಲ್ಲಿ ನಡೀತಾ ಇದೆ. ಅಂಬೇಡ್ಕರ್ ಹೆಸರಲ್ಲಿ ಹಣ ತಿನ್ನುವವರು ಚೆನ್ನಾಗಿ ತಿಂದಿದ್ದಾರೆ. ಇನ್ನು ಮುಂದಿನ ಬಜೆಟ್‍ನಲ್ಲಿ ಅನುದಾನ ನೀಡಿ ಇದನ್ನು ಅಭಿವೃದ್ಧಿಪಡಿಸೋದಾಗಿ ಶಾಸಕರ ಬಿ.ಎ.ಬಸವರಾಜ ಹೇಳಿದರು.

ಅಂಬೇಡ್ಕರ್ ಭವನವಾಗಿ ಸಾರ್ವಜನಿಕರಿಗೆ ಉಪಯೋಗವಾಗಬೇಕಾಗಿತ್ತು. ಆದರೆ ಈಗ ಅಕ್ರಮದ ತಾಣವಾಗಿ ಜನರಿಗೆ ತಲೆನೋವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *