ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

Public TV
2 Min Read

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿದ ದೆಹಲಿಯ ವಿಶೇಷ ತನಿಖಾ ತಂಡದ ಪೊಲೀಸರು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306(ಆತ್ಮಹತ್ಯೆಗೆ ಕುಮ್ಮಕ್ಕು) ಸೆಕ್ಷನ್ 498 ಎ(ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು, ಅಥವಾ ಆತ್ಮಹತ್ಯೆಗೆ ಪ್ರಚೋದಿಸುವುದು) ಅಡಿಯಲ್ಲಿ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಮುಂದೆ ಸುಮಾರು 3000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಮೇ 24 ರಂದು ವಿಚಾರಣೆಗೆ ಬರಲಿದೆ.

ಚಾರ್ಜ್‍ಶೀಟ್ ಸಲ್ಲಿಕೆಯಾದ ಬಳಿಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಶಶಿ ತರೂರ್, ತನಿಖಾ ವರದಿ ಅಸಮಂಜಸವಾಗಿದೆ. ಪುಷ್ಕರ್ ಅವರನ್ನು ಹತ್ತಿರದಿಂದ ಬಲ್ಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುವುದಿಲ್ಲ. 4 ವರ್ಷ ತನಿಖೆಯ ನಂತರ ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಚೋದನೆಯ ಆರೋಪವನ್ನು ನನ್ನ ಮೇಲೆ ಹೊರಿಸಿದ್ದಾರೆ. ಇದು ಉದ್ದೇಶ ಪೂರಿತವಾಗಿದೆ. ಈ ಪ್ರಕರಣದಲ್ಲಿ ಯಾರ ವಿರುದ್ಧವು ಸಾಕ್ಷಿ ದೊರೆತಿಲ್ಲವೆಂದು 2017ರ ಅಕ್ಟೋಬರ್‍ನಲ್ಲಿ ಕಾನೂನು ಅಧಿಕಾರಿಗಳು ಹೈಕೋರ್ಟ್ ಗೆ ಹೇಳಿಕೆ ನೀಡಿದ್ದರು. ಆದರೆ ಆರು ತಿಂಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ ಏನು?
ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರ ಜನವರಿಯಲ್ಲಿ ನಗರದ ಲೀಲಾ ಪ್ಯಾಲೆಸ್ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮೊದಲಿಗೆ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದರು. ನಂತರ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಯಿತು. ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಸುನಂದಾ ದೇಹದಲ್ಲಿ ಗಾಯವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಅತಿ ಹೆಚ್ಚು ಮಾತ್ರೆಗಳನ್ನು ಸೇವಿಸಿದ ಪರಿಣಾಮ ಸುನಂದಾ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿತ್ತು. 2014ರ ಜುಲೈನಲ್ಲಿ ಏಮ್ಸ್ ವೈದ್ಯ ಸುದೀರ್ ಗುಪ್ತಾ ಸುಳ್ಳು ವರದಿ ನೀಡುವಂತೆ ನಮ್ಮ ಮೇಲೆ ಒತ್ತಡ ಇತ್ತು ಹೇಳಿಕೆ ನೀಡಿದ್ದರು. 2014ರ ಅಕ್ಟೋಬರ್ 10ರಂದು ಸುನಂದಾ ಅವರನ್ನು ವಿಷಪ್ರಾಶಣ ಮಾಡಿ ಹತ್ಯೆ ಮಾಡಲಾಗಿದೆ ಎಂದು ಈ ಪ್ರಕರಣವನ್ನು ತನಿಖೆ ನಡೆಸಿದ ವೈದ್ಯಕೀಯ ತಂಡ ವರದಿ ನೀಡಿತ್ತು. 2015ರ ಜನವರಿಯಲ್ಲಿ ದೆಹಲಿ ಪೊಲೀಸರು ತರೂರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

ತರೂರ್ ನಿವಾಸದಲ್ಲಿದ್ದ ಮನೆ ಕೆಲಸ ಮಾಡುತ್ತಿದ್ದ ನರೈನ್ ಪೊಲೀಸ್ ವಿಚಾರಣೆ ವೇಳೆ ಸುನಂದಾ ಜೊತೆ ತರೂರ್ ನಿತ್ಯ ಗಲಾಟೆ ಮಾಡುತ್ತಿದ್ದರು. ಸುನಂದಾ ಮೃತಪಡುವ ಎರಡೂ ದಿನದ ಮೊದಲು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ನಾನು ನಿಮ್ಮ ಎಲ್ಲ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರೆ ನಿಮ್ಮ ಜೀವನ ಅಂತ್ಯವಾಗುತ್ತದೆ ಎಂದು ಸುನಂದಾ ಪುಷ್ಕರ್ ಹೇಳಿದ್ದರು ಎಂದು ತಿಳಿಸಿದ್ದ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿವಾದಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *