ಸಾಲ ವಾಪಸ್ ಕೊಡಲಿಲ್ಲ ಎಂದು 11 ಮಹಡಿಯಿಂದ ಸ್ನೇಹಿತನನ್ನೇ ತಳ್ಳಿದ್ರು

Public TV
1 Min Read

– ಮೂವರು ಸ್ನೇಹಿತರಿಂದ ಇಂಜಿನಿಯರ್ ವಿದ್ಯಾರ್ಥಿ ಬರ್ಬರ ಹತ್ಯೆ

ಥಾಣೆ: 15 ಸಾವಿರ ಸಾಲ ಪಡೆದು ಸರಿಯಾದ ಸಮಯಕ್ಕೆ ವಾಪಸ್ ಕೊಡಲಿಲ್ಲ ಎಂದು ಸ್ನೇಹಿತನನ್ನೇ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿಕೊಂಡು 11 ಮಹಡಿಯಿಂದ ಕೆಳಗೆ ತಳ್ಳಿ ಕೊಲೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಮೂವರು ಆರೋಪಿಗಳನ್ನು ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಎಂದು ಗುರುತಿಸಲಾಗಿದೆ. ಮೃತನನ್ನು ಸಾಗರ್ ಚಿಲ್ವೆರಿ ಎಂದು ಗುರುತಿಸಲಾಗಿದೆ. ಕೊಲೆಯಾದ ಸಾಗರ್ ಮತ್ತು ಆರೋಪಿಗಳು ಫ್ಲ್ಯಾಟ್‍ನಲ್ಲಿ ಒಟ್ಟಿಗೆ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಸಾಗರ್ ಜನವರಿ 9 ರಂದು ಅಭಿನವ್ ಜಾಧವ್ ಕಡೆಯಿಂದ ಶೇ.10 ಬಡ್ಡಿಗೆ 15 ಸಾವಿರ ಸಾಲ ಪಡೆದುಕೊಂಡಿರುತ್ತಾನೆ. ಈ ಹಣವನ್ನು ಕಳೆದ ಸೋಮವಾರಕ್ಕೆ ವಾಪಸ್ ಕೊಡುವುದಾಗಿ ಸಾಗರ್ ಹೇಳಿರುತ್ತಾನೆ. ಆದರೆ ಕೊಡಲು ಸಾಧ್ಯವಾಗಿರಲಿಲ್ಲ. ಈ ವಿಚಾರಕ್ಕೆ ಫ್ಲ್ಯಾಟ್‍ನ ಪಾರ್ಕಿಂಗ್ ಜಾಗದಲ್ಲಿ ಜಾಧವ್ ಮತ್ತು ಸಾಗರ್ ಜಗಳವಾಡಿರುತ್ತಾರೆ. ಆಗ ಮಧ್ಯೆ ಬಂದ ಸೆಕ್ಯೂರಿಟಿ ಗಾರ್ಡ್ ಜಗಳ ಬಿಡಿಸಿ ವಾಪಸ್ ಕಳುಹಿಸಿರುತ್ತಾರೆ.

ಈ ಘಟನೆಯ ನಂತರ ಫ್ಲ್ಯಾಟ್‍ಗೆ ಹೋದ ಇಬ್ಬರು ಮತ್ತೆ ಜಗಳವಾಡುತ್ತಾರೆ. ಈ ವೇಳೆ ಜಾಧವ್‍ಗೆ ಅಕ್ಷಯ್ ಮತ್ತು ತೇಜಸ್ ಸಾಥ್ ಕೊಡುತ್ತಾರೆ. ಆಗ ಮೂವರು ಸೇರಿಕೊಂಡು ಸಾಗರ್ ಅನ್ನು 11 ಮಹಡಿಯಿಂದ ತಳ್ಳಿದ್ದಾರೆ. ಇದನ್ನು ನೋಡಿದ ಸೆಕ್ಯೂರಿಟಿ ಗಾರ್ಡ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸೆಕ್ಯೂರಿಟಿ ಗಾರ್ಡ್ ನೀಡಿದೆ ಹೇಳಿಕೆ ಮೇಲೆ ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಮೂವರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *