ಬೆಂಗಳೂರು: ಇತ್ತೀಚೆಗೆ ತೆಲುಗು ನಿರ್ದೇಶಕ ಸುಕುಮಾರ್ ಬೆಂಗಳೂರಿಗೆ ಬಂದಿದ್ದು, ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಮತ್ತು ಸುಕುಮಾರ್ ಇಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸುಕುಮಾರ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಇವರು ಸೂರಜ್ ಗೌಡ ಅಭಿನಯದ ‘ಲಕ್ಷ್ಮಿತನಯ’ ಚಿತ್ರದ ಮುಹೂರ್ತಕ್ಕೆ ಅತಿಥಿಯಾಗಿ ಬಂದಿದ್ದರು. ಇದೇ ವೇಳೆ ಡಾ. ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.
ಸಿನಿಮಾ ಮುಹೂರ್ತ ಮುಗಿದ ನಂತರ ದರ್ಶನ್ ಅವರು ಭೇಟಿ ಮಾಡಿದ್ದು, ಕುತೂಹಲವನ್ನು ಮೂಡಿಸಿದೆ. ದರ್ಶನ್ ಮುಂದೆ ತೆಲುಗು ಸಿನಿಮಾ ಮಾಡಬಹುದಾ ಎಂಬ ಸುದ್ದಿ ಇವರ ಭೇಟಿ ನಂತರ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ದರ್ಶನ್ ಅಭಿನಯದ ಸಿನಿಮಾಗಳು ತಮಿಳು, ಹಿಂದೆ ಮತ್ತು ತೆಲುಗಿನಲ್ಲಿ ಡಬ್ ಆಗಿವೆ. ಆದರೆ ಪರಭಾಷೆಯಲ್ಲಿ ಇದುವರೆಗೂ ಚಾಲೆಂಜಿಂಗ್ ಸ್ಟಾರ್ ಸಿನಿಮಾ ಮಾಡಿಲ್ಲ.
ಸುಕುಮಾರ್ ಮತ್ತು ದರ್ಶನ್ ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿವೆ. ಅಭಿಮಾನಿಗಳು ತಮ್ಮ ಟ್ವಿಟ್ಟರ್ ನಲ್ಲಿ ಇಬ್ಬರ ಭೇಟಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇವರಿಬ್ಬರ ಕಾಂಬಿನೇಷನ್ ನಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಬರಲಿ ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾದ ಮುಹೂರ್ತದ ವೇಳೆ ಮಾತನಾಡಿದ್ದ ಸುಕುಮಾರ್ ಅವರು, “ನನಗೆ ಅವಕಾಶ ಸಿಕ್ಕರೇ ಖಂಡಿತವಾಗಿ ಕನ್ನಡದಲ್ಲಿ ಸಿನಿಮಾ ಮಾಡುತ್ತೀನಿ, ನನ್ನ ಜೀವನದಲ್ಲಿ ಒಂದು ಕನ್ನಡ ಸಿನಿಮಾವನ್ನು ಮಾಡೇ ಮಾಡುತ್ತೀನಿ. ಕನ್ನಡದಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ನನಗೂ ಇದೆ” ಎಂದು ತಮ್ಮ ಆಶಯವನ್ನು ಹಂಚಿಕೊಂಡಿದ್ದರು.
ನಿರ್ದೇಶಕ ಸುಕುಮಾರ್ ಅವರು, ಅಲ್ಲು ಅರ್ಜುನ್ ಅಭಿನಯಿನದ ‘ಆರ್ಯ’ ಚಿತ್ರದ ಮೂಲಕ ನಿರ್ದೇಶನವನ್ನು ಆರಂಭಿಸಿದ್ದರು. ನಂತರ ‘ಆರ್ಯ 2’, ‘100% ಲವ್’, ‘ನೇನೊಕ್ಕಡೆ’, ‘ಕುಮಾರಿ 21 ಎಫ್’, ‘ನಾನ್ನಕೂ ಪ್ರೇಮತೋ’ ಹಾಗೂ ಇತ್ತೀಚೆಗೆ ‘ರಂಗಸ್ಥಳಂ’ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.
ದರ್ಶನ್ ಅವರು ‘ಯಜಮಾನ’ ಸಿನಿಮಾ ಮುಗಿದ ಬಳಿಕ ತಮಿಳಿನ ‘ವೀರಂ’ ಚಿತ್ರದ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದು, ಎಂ.ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಿರ್ದೇಶಕ ಸುಕುಮಾರ್ ರವರು ಭೇಟಿಯಾದ ಸಂದರ್ಭದಲ್ಲಿ ತೆಗೆದ ಅದ್ಭುತ ಪೋಟೋ ????????@dasadarshan @aryasukku pic.twitter.com/lk7VxH0TJ1
— D Company(R)Official (@Dcompany171) September 22, 2018