ಅಳಿಯನ ಪ್ರಾಣವನ್ನು ಮಾವ ತೆಗೆದ್ರೆ, ತನ್ನ ಪ್ರಾಣವನ್ನೇ ತಾನೇ ತೆಗೆದ್ಳು ಮಗಳು: ಇದು ಫಿಲ್ಮಿ ಸ್ಟೈಲ್ ಟ್ರಾಜಿಡಿ ಕಥೆ

Public TV
2 Min Read

ಹೈದರಾಬಾದ್: ಸಿನಿಮೀಯ ಕಥೆಯಂತೆ ಮೇಲ್ಜಾತಿ -ಕೆಳಜಾತಿ ಗಲಾಟೆಯಲ್ಲಿ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಅಳಿಯನ್ನು ಮಾವ ಕೊಲೆ ಮಾಡಿ ಸುಟ್ಟು ಹಾಕಿದ್ದರೆ, ಆಳಿಯನನ್ನು ಕೊಲೆ ಮಾಡಿ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಬೀಗುತ್ತಿದ್ದ ತಂದೆಗೆ ಮಗಳು ನೇಣಿಗೆ ಶರಣಾಗುವ ಮೂಲಕ ಶಾಕ್ ನೀಡಿದ್ದಾಳೆ.

ನರೇಶ್(23) ಮಾವನಿಂದಲೇ ಕೊಲೆಯಾದರೆ, ಪತಿ ನಾಪತ್ತೆಯಾಗಿದ್ದನ್ನು ಕಂಡು ಸ್ವಾತಿ(23) ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೆಲಂಗಾಣದಲ್ಲಿ ಈ ಕೊಲೆ, ಆತ್ಮಹತ್ಯೆ ನಡೆದಿದ್ದು, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಪತ್ನಿ ಸ್ವಾತಿಯ ತಂದೆ ಶ್ರೀನಿವಾಸ್ ರೆಡ್ಡಿ ಮತ್ತು ಆತನ ಸಂಬಂಧಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ರೆಡ್ಡಿ ಸಮುದಾಯಕ್ಕೆ ಸೇರಿದ ಸ್ವಾತಿ(23) ನಲಗೊಂಡಾ ಜಿಲ್ಲೆಯ ವಲಿಗೊಂಡದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಫೇಸ್‍ಬುಕ್ ಮೂಲಕ ನರೇಶ್ ಪರಿಚಯವಾಗಿತ್ತು. ಈ ಪ್ರೀತಿಗೆ ಸ್ವಾತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ಮುಂಬೈ ನ್ಯಾಯಾಲಯದಲ್ಲಿ ಮದುವೆಯಾಗಿದ್ದರು.

ಮಗಳು ಮದುವೆಯಾದ ವಿಚಾರ ತಿಳಿದ ತಂದೆ ಶ್ರೀನಿವಾಸ್ ರೆಡ್ಡಿ ಸ್ವಾತಿಗೆ ಕರೆ ಮಾಡಿ, ಮನೆಗೆ ಬಾ, ಬಹಳ ಅದ್ಧೂರಿಯಾಗಿ ನಿಮ್ಮಿಬ್ಬರ ಮದುವೆ ನಡೆಸುತ್ತೇನೆ ಎಂದು ಹೇಳಿದ್ದ. ಈ ಮಾತಿಗೆ ಬೆಲೆ ನೀಡಿದ ಸ್ವಾತಿ ಮೇ 2ರಂದು ತಂದೆಯ ಜೊತೆ ತನ್ನ ಗ್ರಾಮಕ್ಕೆ ತೆರಳಿದ್ದರೆ, ನರೇಶ್ ಲಿಂಗರಾಜಪಲ್ಲಿ ಗ್ರಾಮಕ್ಕೆ ತೆರಳಿದ್ದ.

ಅಳಿಯನ ಕೊಲೆ:
ನರೇಶ್ ಲಿಂಗರಾಜಪುರಪಲ್ಲಿಕ್ಕೆ ತೆರಳುತ್ತಿದ್ದಾಗ ಶ್ರೀನಿವಾಸ್ ರೆಡ್ಡಿ ತನ್ನ ಸಂಬಂಧಿಯ ಜೊತೆ ಸೇರಿ, ನರೇಶ್ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯಾದ ಮೃತದೇಹವನ್ನು ಬೆಂಕಿಯಿಂದ ಸುಟ್ಟು ಕೆಲ ಭಾಗಗಳನ್ನು ನದಿಗೆ ಇವರು ಎಸೆದಿದ್ದರು.

ನರೇಶ್ ಸಂಪರ್ಕಿಸಲು ಸಾಧ್ಯವಾಗ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಸ್ವಾತಿ ಮನೆಯ ಸ್ನಾನಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಅಂತ್ಯಸಂಸ್ಕಾರವನ್ನು ತಂದೆ ಶ್ರೀನಿವಾಸ ರೆಡ್ಡಿ ನರೇಶ್ ಸುಟ್ಟ ಜಾಗದಲ್ಲಿ ನೆರೆವೇರಿಸಿದ್ದ.

ಮಗಳಿಗೆ ನರೇಶ್ ತುಂಬಾ ಹಿಂಸೆ ನೀಡುತ್ತಿದ್ದ. ವರದಕ್ಷಿಣ ತರಬೇಕೆಂದು ಪೀಡಿಸುತ್ತಿದ್ದ. ಈ ಕಾರಣಕ್ಕೆ ನಾನು ನರೇಶ್ ನನ್ನು ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾನೆ.

ಬೆಳಕಿಗೆ ಬಂದಿದ್ದು ಹೇಗೆ? ನರೇಶ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ತಂದೆ ವೆಂಕಟೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೇ ಮಗನ ನಾಪತ್ತೆಯಾಗಿರುವ ಪ್ರಕರಣದ ಹಿಂದೆ ಸ್ವಾತಿ ತಂದೆಯ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಜೂನ್ 1ರ ಒಳಗಡೆ ನಾಪತ್ತೆ ಪ್ರಕರಣವನ್ನು ಬೇಧಿಸಿ ಮಾಹಿತಿ ನೀಡಬೇಕೆಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀನಿವಾಸ ರೆಡ್ಡಿಯನ್ನು ವಿಚಾರಣೆ ನಡೆಸಿದಾಗ ಲವ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದೆ.

ಶನಿವಾರ ಪೊಲೀಸರು ನರೇಶ್‍ನನ್ನು ಹತ್ಯೆ ಮಾಡಿದ ಸ್ಥಳದಿಂದ ಕೆಲ ಅವಶೇಷಗಳನ್ನು ತೆಗೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *