ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅವಕಾಶ

Public TV
1 Min Read

– ತೆಲಂಗಾಣ ಸರ್ಕಾರದ ಆದೇಶಕ್ಕೆ ಬಿಜೆಪಿ ಟೀಕೆ

ಹೈದರಾಬಾದ್: ಪವಿತ್ರ ರಂಜಾನ್‌ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡುವುದಕ್ಕೆ ಅವಕಾಶ ನೀಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಆದೇಶವನ್ನು ತುಷ್ಟೀಕರಣ ರಾಜಕೀಯದ ಪರಮಾವಧಿ ಎಂದು ಬಿಜೆಪಿ ಟೀಕಿಸಿದೆ.

ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರು, ಮಾ.2 ರಿಂದ 31 ರ ವರೆಗೆ ರಂಜಾನ್ ಸಮಯದಲ್ಲಿ ಅಗತ್ಯ ಪ್ರಾರ್ಥನೆ ಸಲ್ಲಿಸಲು ಸರ್ಕಾರಿ ಮುಸ್ಲಿಂ ನೌಕರರಿಗೆ ಒಂದು ಗಂಟೆ ಮೊದಲು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಲು ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸರ್ಕಾರಿ ಮುಸ್ಲಿಂ ನೌಕರರು/ಶಿಕ್ಷಕರು/ಗುತ್ತಿಗೆದಾರರು/ಹೊರಗುತ್ತಿಗೆ/ಮಂಡಳಿಗಳು/ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ರಂಜಾನ್ ಪವಿತ್ರ ಮಾಸದಲ್ಲಿ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಡಲು ಸರ್ಕಾರವು ಅನುಮತಿ ನೀಡಿದೆ. ಮಾ.2 ರಿಂದ 31 ರ ವರೆಗೆ (ಸೇವೆಗಳ ತುರ್ತು ಪರಿಸ್ಥಿತಿಯಲ್ಲಿ ಅವರ ಉಪಸ್ಥಿತಿಯು ಅಗತ್ಯವಿರುವುದನ್ನು ಹೊರತುಪಡಿಸಿ) ಅಗತ್ಯ ಪ್ರಾರ್ಥನೆಗಳನ್ನು ಸಲ್ಲಿಸಲು ಕಚೇರಿಯಿಂದ ಬೇಗ ಹೊರಡಲು ಅನುಮತಿಸಲಾಗಿದೆ ಎಂದು ಶಾಂತಿ ಕುಮಾರಿ ಫೆ.15 ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತೆಲಂಗಾಣ ರಾಜ್ಯ ಅಲ್ಪಸಂಖ್ಯಾತ ನೌಕರರ ಸೇವಾ ಸಂಘದ ರಾಜ್ಯ ಅಧ್ಯಕ್ಷರ ಕೋರಿಕೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಈ ಜ್ಞಾಪಕ ಪತ್ರವನ್ನು ಹೊರಡಿಸಿದ್ದಾರೆ.

ತುಷ್ಟೀಕರಣ ರಾಜಕೀಯವು ಅದರ ಉತ್ತುಂಗದಲ್ಲಿದೆ. ತೆಲಂಗಾಣ ಸರ್ಕಾರ ರಂಜಾನ್‌ಗೆ ಮುಂಚಿತವಾಗಿ ರಜೆ ನೀಡುತ್ತದೆ. ಆದರೆ ಹಿಂದೂ ಹಬ್ಬಗಳನ್ನು ನಿರ್ಲಕ್ಷಿಸುತ್ತದೆ ಎಂದು ಗೋಶಮಹಲ್‌ನ ಬಿಜೆಪಿಯ ಶಾಸಕ ಠಾಕೂರ್ ರಾಜಾ ಸಿಂಗ್ ಟೀಕಿಸಿದ್ದಾರೆ.

Share This Article