ಅಣ್ಣ ಓಡಿಹೋಗಿ ಮದ್ವೆಯಾಗಿದ್ದಕ್ಕೆ ತಮ್ಮನನ್ನು ಕಂಬಕ್ಕೆ ಕಟ್ಟಿ, ಸುಟ್ಟರು

Public TV
2 Min Read

– ರೈಲ್ ಮಿಲ್‍ನಲ್ಲಿ ಸಜೀವ ದಹನ
– ಮೂವರು ಆರೋಪಿಗಳು ಅರೆಸ್ಟ್

ಚಂಡೀಗಢ: ಅಣ್ಣ ಯುವತಿಯೋರ್ವಳನ್ನು ಪ್ರೀತಿಸಿ ಓಡಿಹೋಗಿ ಮದುವೆಯಾದ ಸಿಟ್ಟಿಗೆ ತಮ್ಮನನ್ನು ಯುವತಿ ಕಡೆಯವರು ಕಂಬಕ್ಕೆ ಕಟ್ಟಿ, ಸಜೀವ ಸುಟ್ಟ ಅಮಾನವೀಯ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

ಶನಿವಾರ ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಸ್ಪ್ರೀತ್ ಸಿಂಗ್(16) ಮೃತ ದುರ್ದೈವಿ. ಆರೋಪಿಗಳನ್ನು ಜಶನ್ ಸಿಂಗ್, ಗುರ್ಜಿತ್ ಸಿಂಗ್ ಹಾಗೂ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಜಸ್ಪ್ರೀತ್ ಅಣ್ಣ ಕುಲ್ವಿಂದರ್ ಸಿಂಗ್ ಹಾಗೂ ಆರೋಪಿ ಜಶನ್ ತಂಗಿ ರಾಜೋ ಕೌರ್ ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ದಲಿತ ಸಮುದಾಯದವರಾಗಿದ್ದರೂ ರಾಜೋ ಮನೆಯವರಿಗೆ ಕುಲ್ವಿಂದರ್ ಇಷ್ಟವಿರಲಿಲ್ಲ. ಹೀಗಾಗಿ ಎರಡು ವರ್ಷದ ಹಿಂದೆ ಕುಲ್ವಿಂದರ್ ಮತ್ತು ರಾಜೋ ಓಡಿ ಹೋಗಿ ಮದುವೆಯಾಗಿದ್ದರು. ಆದರೆ ಅವರಿಬ್ಬರನ್ನು ಗ್ರಾಮಕ್ಕೆ ಬರಲು ಮನೆಯವರು ಬಿಡುತ್ತಿರಲಿಲ್ಲ. ಇದನ್ನೂ ಓದಿ:ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ

ಅಲ್ಲದೆ ಈ ವಿಷಯಕ್ಕೆ ರಾಜೋ ಕುಟುಂಬ ಗ್ರಾಮದಲ್ಲಿ ತಲೆತಗ್ಗಿಸುವಂತಾಗಿತ್ತು. ಇದರ ನಡುವೆ ಜಸ್ಪ್ರೀತ್ ಪದೇ ಪದೇ ರಾಜೋ ಕುಟುಂಬಕ್ಕೆ ಇದೇ ವಿಚಾರಕ್ಕೆ ಹಿಯಾಳಿಸುತ್ತಿದ್ದನು. ಈ ಬಗ್ಗೆ ತಿಳಿದು ಬೇರೆ ಊರಿನಲ್ಲಿ ಪತ್ನಿ, ಮಗುವಿನೊಂದಿಗೆ ವಾಸಿಸುತ್ತಿದ್ದ ಜಶನ್ ಗ್ರಾಮಕ್ಕೆ ಮರುಳಿದ್ದನು. ಮೊದಲೇ ಅಣ್ಣ ಮರ್ಯಾದೆ ಹಾಳು ಮಾಡಿದ್ದಾನೆ, ಈಗ ತಮ್ಮ ಹೀಯಾಳಿಸುತ್ತಿದ್ದಾನೆ ಎಂದು ಜಶನ್ ಕೋಪಕೊಂಡಿದ್ದನು.

ಇದೇ ಸಿಟ್ಟಲ್ಲಿ ಶನಿವಾರ ರಾತ್ರಿ ಜಸ್ಪ್ರೀತ್ ಒಬ್ಬನೇ ಸಿಕ್ಕಾಗ ಆತನನ್ನು ಜಶನ್ ಹಾಗೂ ಆತನ ಸ್ನೇಹಿತರು ಎಳೆದುಕೊಂಡು ಹೋಗಿದ್ದರು. ಮುಚ್ಚಿದ್ದ ರೈಸ್ ಮಿಲ್‍ನೊಳಗೆ ಜಸ್ಪ್ರೀತ್‍ನನ್ನು ಕರೆದೊಯ್ದು, ಕಂಬಕ್ಕೆ ಆತನನ್ನು ಕಟ್ಟಿ ಬೆಂಕಿ ಹಚ್ಚಿದ್ದರು. ಪರಿಣಾಮ ಜಸ್ಪ್ರೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಇದನ್ನೂ ಓದಿ:22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

ಇತ್ತ ಜಸ್ಪ್ರೀತ್ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದರು. ಜಸ್ಪ್ರೀತ್ ಹುಡುಕಾಟದಲ್ಲಿದ್ದ ಪೊಲೀಸರು ಭಾನುವಾರ ಆತನ ಮೃತದೇಹ ರೈಸ್ ಮಿಲ್‍ನಲ್ಲಿ ಪತ್ತೆಹಚ್ಚಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಮೂವರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *