ಅತಿ ವೇಗದ ಚಾಲನೆಗೆ ಟೆಕ್ಕಿ ಬಲಿ, ಕೋಮಾಕ್ಕೆ ಜಾರಿದ ಪತ್ನಿ!

Public TV
2 Min Read

ಹೈದರಾಬಾದ್: ಬೈಕ್ ಗಳೆರೆಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಟೆಕ್ಕಿ ದುರ್ಮರಣಕ್ಕೀಡಾಗಿದ್ದು, ಪತ್ನಿ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಂಜಾರಾ ಹಿಲ್ಸ್ ನ ಇಂದಿರಾ ನಗರದಲ್ಲಿ ನಡೆದಿದೆ.

ಈ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮೃತ ದುರ್ದೈವಿಯನ್ನು 33 ವರ್ಷದ ಜಿ. ರಾಜೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಸಾಫ್ಟ್ ವೇರ್ ಎಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಇವರ ಪತ್ನಿ 30 ವರ್ಷದ ಭುವನ ಹಾಗೂ ಇನ್ನೊಬ್ಬ ಬೈಕ್ ಸವಾರ 32 ವರ್ಷದ ವಿಜಯ್ ಮುದಿರಾಜ್ ಗಂಭೀರ ಗಾಯಗೊಂಡಿದ್ದಾರೆ.

ಘಟನೆ ವಿವರ:
ಪ್ರಸಾದ್ ಹಾಗೂ ಭುವನ ಭಾನುವಾರ ಬೆಳಗ್ಗೆ ಕೃಷ್ಣ ನಗರದಲ್ಲಿರೋ ಆಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಪೂಜೆ ಮುಗಿಸಿ ಮನೆಗೆ ವಾಸಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಗ್ರೀನ್ ಬವಾರ್ಚಿ ಎಂಬಲ್ಲಿ ಅಡ್ಡ ರಸ್ತೆಯಾಗಿ ಹೋಗಲೆಂದು ತನ್ನ ಪಲ್ಸರ್ ಬೈಕ್ ಟರ್ನ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಬಂದಿಯಿಂದ ಬಂದ ಬೈಕ್, ವೇಗವಾಗಿ ಬಂದು ಪ್ರಸಾದ್ ಬೈಕ್ ಗೆ ಗುದ್ದಿದೆ.

ಪ್ರಸಾದ್ ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಪ್ರಸಾದ್ ಹಾಗೂ ಭುವನ ಹಾಗೂ ಇನ್ನೊಂದು ಬೈಕ್ ಸವಾರ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಪ್ರಸಾದ್ ತಲೆಯಿಂದ ಹೆಲ್ಮೆಟ್ ಹಾರಿದೆ. ಹೀಗಾಗಿ ರಸ್ತೆಗೆ ತಲೆ ಹೊಡೆದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇನ್ನು ಭುವನ ಹಾಗೂ ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಭುವನ ಅವರು ಕೋಮಾದಲ್ಲಿದ್ದಾರೆ. ಬೈಕ್ ಸವಾರ ಮುದಿರಾಜ್ ನನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೂ ಕೂಡ ಕೋಮಾದಲ್ಲಿದ್ದಾರೆ ಅಂತ ಬಂಜಾರಾ ಹಿಲ್ಸ್ ಇನ್ಸ್ ಪೆಕ್ಟರ್ ಕೆ ಶ್ರೀನಿವಾಸ್ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳ ಇಳಿಜಾರು ಪ್ರದೇಶವಾಗಿದ್ದರಿಂದ ಮುದಿರಾಜ್ ತನ್ನ ಬೈಕನ್ನು ವೇಗವಾಗಿ ಚಲಾಯಿಸಿದ ಪರಿಣಾಮ, ಬೈಕ್ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಈ ಅವಘಡ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಸದ್ಯ ಘಟನೆ ಸಂಬಂಧ ಐಪಿಸಿ ಸೆಕ್ಷನ್ 304 ಹಾಗೂ 338ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *