ಟೀಂ ಇಂಡಿಯಾ ಸೂಪರ್ ಫ್ಯಾನ್ ಅಜ್ಜಿ ಇನ್ನಿಲ್ಲ

Public TV
3 Min Read

ನವದೆಹಲಿ: ಕಳೆದ ವಿಶ್ವಕಪ್‍ನಲ್ಲಿ ಸಖತ್ ಫೇಮಸ್ ಆಗಿದ್ದ ಟೀಂ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್(87) ಸೋಮವಾರದಂದು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಟೀಂ ಇಂಡಿಯಾ ತನ್ನ ಸೂಪರ್ ಫ್ಯಾನ್‍ನನ್ನು ಕಳೆದುಕೊಂಡಿದೆ.

ವಿಶ್ವಕಪ್‍ನ ಭಾರತ ಮತ್ತು ಬಾಂಗ್ಲಾದೇಶ ಮ್ಯಾಚ್ ವೇಳೆ ಸ್ಟೇಡಿಯಂನಲ್ಲಿ ಚಾರುಲತಾ ಅವರು ಎಲ್ಲರ ಗಮನ ಸೆಳೆದಿದ್ದರು. ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾಗೆ ಅವರು ಪ್ರೋತ್ಸಾಹಿಸಿದ ಪರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಅಭಿಮಾನಿಗಳು ಮಾತ್ರವಲ್ಲ ಟೀ ಇಂಡಿಯಾ ನಾಯಕ ವಿರಾಟ್ ಕೋಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಚಾರುಲತಾ ಅವರ ಪ್ರೀತಿ ಪ್ರೋತ್ಸಾಹಕ್ಕೆ ಮನಸೋತ್ತಿದ್ದರು. ಆದರೆ ಎಲ್ಲರ ಮನಗೆದ್ದಿದ್ದ ಸೂಪರ್ ಫ್ಯಾನ್ ವಿಧಿವಶರಾಗಿದ್ದು, ಅವರ ಇನ್‍ಸ್ಟಾಗ್ರಾಂ ಖಾತೆಯಿಂದ ಅವರ ಅಗಲಿಕೆಯ ವಿಚಾರ ತಿಳಿದುಬಂದಿದೆ.

ಚಾರುಲತಾ ಅವರ ಮೊಮ್ಮಗಳು ಅವರ ಅಗಲಿಕೆಯ ಸುದ್ದಿಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರ ತಿಳಿಸಲು ದುಃಖವಾಗುತ್ತಿದೆ. ಜ.13ರ ಸಂಜೆ 5:30ರ ಹೊತ್ತಿಗೆ ನಮ್ಮ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಅವರು ತುಂಬಾ ಒಳ್ಳೆಯವರು. ಸಣ್ಣ ವಸ್ತುಗಳು ಸಣ್ಣ ಪ್ಯಾಕೆಜ್‍ಗಳಲ್ಲಿ ಬರುತ್ತದೆ ಎಂಬುದು ಸತ್ಯ. ಅವರು ಅಸಾಧಾರಣ. ಅವರು ನಮ್ಮ ಪ್ರಪಂಚ ಎಂದು ಬರೆದು ಪೋಸ್ಟ್ ಮಾಡಲಾಗಿದೆ.

ವಿಶ್ವಕಪ್ ವೇಳೆ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಚಾರುಲತಾ ಅವರು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಪಂದ್ಯದ ಬಳಿಕ ಚಾರುಲತಾ ಅವರನ್ನು ಭೇಟಿ ಮಾಡಿದ್ದ ಕೊಹ್ಲಿ, ಅವರಿಂದ ಆಶೀರ್ವಾದ ಪಡೆದಿದ್ದರು. ಅಲ್ಲದೇ ಅವರ ಫೋಟೋ ಹಂಚಿಕೊಂಡು’ ಇಷ್ಟೊಂದು ಪ್ರೀತಿ ಹಾಗೂ ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಅದರಲ್ಲೂ ಚಾರುಲತಾ ಪಟೇಲ್ ಅವರಿಗೆ ತುಂಬು ಹೃದಯದ ಧನ್ಯವಾದ. 87 ವರ್ಷದ ವಯಸ್ಸಿನಲ್ಲೂ ಇಂತಹ ಅಭಿಮಾನವನ್ನು ತೋರಿರುವುದನ್ನು ನಾನು ನೋಡಿಲ್ಲ. ಅವರಿಂದ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದ್ದರು. ಸದ್ಯ ಕೊಹ್ಲಿ ತಾವು ಕೊಟ್ಟ ಮಾತಿನಂತೆ ಹಿರಿಯ ಅಭಿಮಾನಿಗೆ ಪಂದ್ಯದ ಟಿಕೆಟ್ ನೀಡಿದ್ದರು. ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

https://www.instagram.com/p/B7TTtSyJm6X/

ಯಾರು ಈ ಅಜ್ಜಿ?
ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದ್ದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನನಗೆ ಕೆಲಸಗಳಿದ್ದ ಕಾರಣ ಪಂದ್ಯ ವೀಕ್ಷಿಸಲು ಸಮಯ ಇರುತ್ತಿರಲಿಲ್ಲ. ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದ್ದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆದೆ. ಈ ನಡುವೆ ನನಗೆ ಕೆಲಸ ಇಲ್ಲ. ಹಾಗಾಗಿ ನನಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ವೀಕ್ಷಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *