‘ಕಾಫಿ ತುಂಬಾ ಕಾಸ್ಟ್ಲಿ, ಗ್ರೀನ್ ಟೀ ಮಾತ್ರ ಕುಡಿಯಿರಿ’

Public TV
1 Min Read

ಮುಂಬೈ: ಕಾಫಿ ತುಂಬಾ ಕಾಸ್ಟ್ಲಿ ಆಗಿದೆ, ಈಗ ಗ್ರೀನ್ ಟೀ ಮಾತ್ರ ಕುಡಿಯಿರಿ ಎಂದು ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ‘ಕಾಫಿ ವಿಥ್ ಕರಣ್’ ವಿವಾದವನ್ನು ನೆನೆದಿದ್ದಾರೆ.

ಇನ್‍ಸ್ಟಾಗ್ರಾಮ್ ಚಾಟ್ ಶೋನಲ್ಲಿ ಪಾಂಡ್ಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡುತ್ತಿದ್ದಾಗ 2019ರಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಕಾರ್ತಿಕ್ ಅವರು ಕರಣ್ ವಿಥ್ ಕಾಫಿ ಕಾರ್ಯಕ್ರಮ ಪ್ರಸ್ತಾಪಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಹಾರ್ದಿಕ್, “ಕಾಫಿ ತುಂಬಾ ದುಬಾರಿಯಾಗಿದೆ. ಹೀಗಾಗಿ ಗ್ರೀನ್ ಟೀ ಕುಡಿಯುತ್ತಿದ್ದೇನೆ. ನಾನು ಒಮ್ಮೆ ಮಾತ್ರ ಕಾಫಿ ಕುಡಿದಿದ್ದೇನೆ. ಆ ಕಾಫಿ ತುಂಬಾ ದುಬಾರಿಯಾಗಿತ್ತು. ಸ್ಟಾರ್‌ ಬಕ್ಸ್‌ನಲ್ಲಿ ಅಂತಹ ದುಬಾರಿ ಕಾಫಿ ಕೂಡ ಇಲ್ಲ. ಆ ದಿನದ ನಂತರ, ನಾನು ಕಾಫಿಯನ್ನೇ ತ್ಯಜಿಸಿದೆ” ಎಂದು ಹೇಳಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಟೂರ್ನಿ ನಡೆಸುವ ಕುರಿತು ಕೆಲವು ಸಲಹೆಗಳು ಕೇಳಿಬಂದವು. ಈ ಪೈಕಿ ಖಾಲಿ ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯವನ್ನು ನಡೆಯುವುದು ಒಂದಾಗಿದೆ. ಈ ವಿಚಾರವಾಗಿ ಮಾತನಾಡಿದ ಹಾರ್ದಿಕ್, “ಪ್ರೇಕ್ಷಕರಿಲ್ಲದೆ ಆಡುವುದು ವಿಭಿನ್ನ ಅನುಭವವಾಗಿರುತ್ತದೆ. ಸತ್ಯವೆಂದರೆ ನಮಗೆ ಪ್ರೇಕ್ಷಕರು ತುಂಬಿದ ಕ್ರೀಡಾಂಗಣದಲ್ಲಿ ಆಡುವ ಅಭ್ಯಾಸವಿದೆ. ನಾನು ಪ್ರೇಕ್ಷಕರಿಲ್ಲದೆ ರಂಜಿ ಟ್ರೋಫಿಯನ್ನು ಆಡಿದ್ದೇನೆ. ಅದು ವಿಭಿನ್ನ ಅನುಭವವಾಗಿದೆ. ನಿಜ ಹೇಳಬೇಕೆಂದರೆ, ಪ್ರೇಕ್ಷಕರಿಲ್ಲದೆ ಐಪಿಎಲ್ ಆಡುವುದು ಉತ್ತಮ ಆಯ್ಕೆಯಾಗಿದೆ. ಮನೆಯಲ್ಲಿರುವ ಜನರಿಗೆ ಮನರಂಜನೆ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಟಿವಿ ಚಾನೆಲ್‍ವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ 2018ರಲ್ಲಿ ಭಾಗವಹಿಸಿದ್ದರು. ಈ ವೇಳೆ ಹಾರ್ದಿಕ್ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಇದರಿಂದ ಅವರು ತಾತ್ಕಾಲಿಕ ನಿಷೇಧಕ್ಕೂ ಒಳಗಾಗಿದ್ದರು. ಬಳಿಕ ಅವರಿಗೆ ಬಿಸಿಸಿಐ ದಂಡ ವಿಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *