ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

Public TV
2 Min Read

– ಸರ್ಕಾರದ ಅನುದಾನವಿಲ್ಲದೇ ಉಚಿತ ಆಂಗ್ಲ ಮಾಧ್ಯಮ ಶಾಲೆ ಶುರು
– ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆ ಶಿಕ್ಷಕರು ಸಡ್ಡು

ಚಿಕ್ಕೋಡಿ: ಗಡಿಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ (Government School) ದಾಖಲಾತಿ ಕುಸಿಯುತ್ತಿರುವ ಕಾರಣ ಸರ್ಕಾರದ ಅನುದಾನವಿಲ್ಲದೇ ಎಲ್‌ಕೆಜಿ-ಯುಕೆಜಿ (LKG-UKG) ಆರಂಭಿಸುವ ಮೂಲಕ ಶಿಕ್ಷಕರು ಮಾದರಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗಡಿಭಾಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದ್ದು, ಇದರಿಂದಾಗಿ ಸರ್ಕಾರಕ್ಕೆ ದಾಖಲಾತಿ ಕಡಿಮೆಯಾಗುತ್ತಿರುವ ಟೆನ್ಶನ್ ಹೆಚ್ಚಾಗುತ್ತಿದೆ. ಇದರ ನಡುವೆಯೂ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವಲ್ಲಿ ಶಿಕ್ಷಕರು (Teachers) ನಿರತರಾಗಿದ್ದು, ಸರಕಾರದ ಅನುದಾನವಿಲ್ಲದೆ ಎಲ್‌ಕೆಜಿ-ಯುಕೆಜಿ ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ.ಇದನ್ನೂ ಓದಿ: ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

ಮಹಾರಾಷ್ಟ್ರ (Maharashtra) ಗಡಿಭಾಗದ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಗೋಟೂರ (Gotur) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಜರಾತಿ ಕೊರತೆ ಇತ್ತು. ಹೀಗಾಗಿ ಸರ್ಕಾರದ ಅನುದಾನವಿಲ್ಲದೇ ಇದ್ದರೂ ಶಾಲಾ ಸುಧಾರಣಾ ಸಮಿತಿ ಹಾಗೂ ಶಾಲೆಯ ಶಿಕ್ಷಕರು ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ (English Medium) ಯುಕೆಜಿ – ಎಲ್‌ಕೆಜಿ ತರಗತಿ ಪ್ರಾರಂಭಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿಯೇ ಶಿಕ್ಷಣ ನೀಡಲು ರೂಪುರೇಷೆ ಹಾಕಿಕೊಂಡಿದ್ದಾರೆ. ಈ ಶಾಲಾ ಮಕ್ಕಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ನಿರ್ವಹಣೆ ವೆಚ್ಚ ಭರಿಸಲು ಮುಂದಾಗಿದ್ದಾರೆ. ಜೊತೆಗೆ ಶಾಲೆಗೆ ಮಕ್ಕಳನ್ನು ಕರೆತರಲು, ಬಟ್ಟೆ, ಪುಸ್ತಕವನ್ನು ಶಿಕ್ಷಕರು ತಮ್ಮ ಸಂಬಳದಿಂದಲೇ ಭರಿಸುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದ್ದು, ಸಾಕಷ್ಟು ಅಭಿಯಾನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಇದೀಗ ತಾವು ಕಲಿಸುವ ಶಾಲೆಯ ಬೆಳವಣಿಗೆ ಬಯಸಿರುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿಯೊಂದಿಗೆ ಸ್ವಂತ ಖರ್ಚಿನಲ್ಲಿಯೇ ಎಲ್‌ಕೆಜಿ -ಯುಕೆಜಿ ತರಗತಿ ಆರಂಭಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

ಇತ್ತೀಚಿಗೆ ಅಂಗನವಾಡಿಯಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಈ ನಡುವೆಯೇ ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ. ಖಾಸಗಿ ಶಾಲೆಯ ಮಾದರಿಯಲ್ಲಿಯೇ ಶಿಕ್ಷಣ ಪದ್ದತಿ ಅನುಸರಿಸಿದ್ದು, ಗ್ರಾಮೀಣ ಭಾಗದ ಪೋಷಕರ ಉತ್ಸಾಹಕ್ಕೆ ಕಾರಣವಾಗಿದೆ. ಎಲ್‌ಕೆಜಿ-ಯುಕೆಜಿ ಆರಂಭಿಸುತ್ತಿದ್ದಂತೆ ಇದೇ ವರ್ಷ 40 ಮಕ್ಕಳು ದಾಖಲಾಗಿದ್ದು, ಈ ಸಂಖ್ಯೆ ಮುಂದಿನ ಬಾರಿ ಹೆಚ್ಚಾಗುವ ವಿಶ್ವಾಸವಿದೆ ಎಂದಿದ್ದಾರೆ.ಇದನ್ನೂ ಓದಿ: ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ 18 ಸಾವಿರಕ್ಕೂ ಹೆಚ್ಚು ಕೇಸ್‌

ಸರ್ಕಾರದ ಸಂಬಳ ಸಿಕ್ಕರೆ ಸಾಕು ನಾವು, ನಮ್ಮ ಕುಟುಂಬ ನೆಮ್ಮದಿಯಿಂದ ಇರಬಹುದು ಎನ್ನುವ ಜನರಿಗೆ ಗೋಟೂರ ಸರ್ಕಾರಿ ಶಾಲೆಯ ಶಿಕ್ಷಕರು ತಾವು ಕಲಿಸುತ್ತಿರುವ ಶಾಲೆಯ ಅಭಿವೃದ್ಧಿ ಬಯಸಿರುವುದು, ಇತರರಿಗೆ ಮಾದರಿಯಾಗಿದೆ.

Share This Article