ಶಿಕ್ಷಕಿ, ಸಿಆರ್‍ಪಿ ಆತ್ಮಹತ್ಯೆ- ಸಹೋದ್ಯೋಗಿಗಳಿಂದ ಕಿರುಕುಳ ಆರೋಪ

Public TV
1 Min Read

ತುಮಕೂರು: ಸಹೋದ್ಯೋಗಿಗಳ ಕಿರುಕುಳದಿಂದ ಬೇಸತ್ತ ಶಿಕ್ಷಕಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ(ಸಿಆರ್‍ಪಿ)ಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ದುಗುಡಿಹಳ್ಳಿಯ ತನ್ನ ಮನೆಯಲ್ಲಿ ಶಿಕ್ಷಕಿ ಮಮತಾ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಘಟ್ಟ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದ ಮಮತಾಗೆ ಕೆಲ ಶಿಕ್ಷಕರು ಹಾಗೂ ನೌಕರರ ಸಂಘದ ಅಧ್ಯಕ್ಷರು ಕಿರುಕುಳ ನೀಡುತಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಮತಾ ತಾಯಿ ಯಶೋಧಾ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲಕ್ಷ್ಮಿಕಾಂತ, ಬರಗೂರು ಕ್ಲಸ್ಟರ್ ಸಿಆರ್ ಪಿ ಪ್ರಸನ್ನ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಮಮತಾಗೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ದಾಖಲಾತಿ, ಕಾಮಗಾರಿ ತನಿಖೆ ಸಂದರ್ಭದಲ್ಲಿ ಈ ಮೂವರು ತನಗೆ ಕಿರುಕುಳ ನೀಡುತಿದ್ದರು ಎಂದು ಮಮತಾ ಮನೆಯವರಲ್ಲಿ ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಮೂವರ ವಿರುದ್ದ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *