ಬೆಂಗಳೂರು: ತನ್ನ ಮೊಮ್ಮಗನೊಂದಿಗೆ ಜಗಳವಾಡಿ ಗಾಯಗೊಳಿಸಿದ್ದಾನೆ ಎನ್ನುವ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬರು 7 ವರ್ಷದ ಬಾಲಕನಿಗೆ ಬ್ಲೇಡ್ ನಿಂದ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಸಘಟ್ಟ ಗ್ರಾಮದ ನಿವಾಸಿಗಳಾದ ಮುನಿರತ್ನ ಮತ್ತು ಅಂಜನ್ ಕುಮಾರ್ ದಂಪತಿ ಮಗು ಪೃಥ್ವಿರಾಜ್(7) ಹಲ್ಲೆಗೊಳಗಾದ ಬಾಲಕ.
ಈ ಮೊದಲು ಬಾಲಕ ಪೃಥ್ವಿರಾಜ್ ಮುನಿಯಮ್ಮಳ ಮೊಮ್ಮಗನ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ಬ್ಲೇಡು ತಾಗಿಸಿ ಗಾಯಗೊಳಿಸಿದ್ದ. ಇದರಿಂದ ಸಿಟ್ಟಾದ ಮುನಿಯಮ್ಮ ನನ್ನ ಮೊಮ್ಮಗನಿಗಾದ ಗತಿ ನಿನಗೂ ಆಗಲಿ ಎಂದು ಈ ರೀತಿ ಪೃಥ್ವಿರಾಜ್ ಮೇಲೆ ಹಲ್ಲೆ ನಡೆಸಿದ್ದಾಳೆ.
ಬ್ಲೇಡ್ ಹರಿತವಾದ್ದರಿಂದ ಬಾಲಕನ ಮೈ ಮೇಲೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಬಾಲಕನನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪೃಥ್ವಿರಾಜ್ ಪಾಲಕರು ಮುನಿಯಮ್ಮ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.