ರೈಲು ಪ್ರಯಾಣಿಕರೇ ಗಮನಿಸಿ: ಟೀ-ಕಾಫಿಗೆ 7 ರೂ. ಮಾತ್ರ ನೀಡಿ, ಜಾಸ್ತಿ ಹಣ ಕೇಳಿದ್ರೆ ದೂರು ಕೊಡಿ

Public TV
2 Min Read

ಎಕ್ಸ್ ಪ್ರೆಸ್ ರೈಲಿನಲ್ಲಿ ವೇಯ್ಟಿಂಗ್ ಟಿಕೆಟ್ ಇದ್ದರೆ ರಾಜಧಾನಿ, ಶತಾಬ್ದಿಯಲ್ಲಿ ಪ್ರಯಾಣಿಸಬಹುದು

ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ, ತಿಂಡಿ ಹಾಗೂ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ ಹೆಚ್ಚು ಹಣ ಕೇಳಿದ್ರೆ ದೂರು ನೀಡಿ ಎಂದು ರೈಲ್ವೆ ಇಲಾಖೆ ಹೇಳಿದೆ.

ರೈಲಿನಲ್ಲಿ ಊಟ ಹಾಗೂ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಈ ಮಾಹಿತಿ ನೀಡಿದೆ. ಕಾಫಿ, ಟೀ, ತಿಂಡಿ, ಊಟ ಹಾಗೂ ನೀರಿನ ಬಾಟಲಿಯ ಬೆಲೆ ಎಷ್ಟು ಎಂಬ ಪಟ್ಟಿಯನ್ನು ರೈಲ್ವೆ ಇಲಾಖೆ ಟ್ವಿಟ್ಟರ್‍ನಲ್ಲಿ ಹಾಕಿದ್ದು, ಕ್ಯಾಟರಿಂಗ್ ಸೇವೆ ಪಡೆದಾಗ ಬಿಲ್ ಕೇಳಿ ಎಂದು ಸೂಚಿಸಿದೆ.

ಒಂದು ವೇಳೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಕೇಳಿದ್ರೆ ರೈಲ್ವೆ ಇಲಾಖೆಯ ಟ್ವಿಟ್ಟರ್ ಖಾತೆಗೆ ದೂರು ನೀಡಬಹುದು. ನಾವು ನಿಮಗಾಗಿ 24*7 ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದೆ.

ಇದರ ಜೊತೆಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಪ್ರಯಾಣಿಕರು ಬೇರೆ ಯಾವುದೇ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರೂ ರಾಜಧಾನಿ ಹಾಗೂ ಶತಾಬ್ದಿ ಪ್ರಯಾಣಿಸುವ ಅವಕಾಶ ಸಿಗಲಿದೆ. ಈ ಹೊಸ ಯೋಜನೆಯನ್ನು ಏಪ್ರಿಲ್‍ನಿಂದ ರೈಲ್ವೆ ಇಲಾಖೆ ಜಾರಿಗೆ ತರಲಿದ್ದು, ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಅದೇ ಹಾದಿಯಲ್ಲಿ ಹೋಗುವ ಮುಂದಿನ ಬದಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯಬಹುದಾಗಿದೆ. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ಮಾಡುವಾಗಲೇ ಪ್ರಯಾಣಿಕರು ಈ ಆಯ್ಕೆಯನ್ನು ಮಾಡಿಕೊಂಡಿರಬೇಕಾಗುತ್ತದೆ.

ಈ ಯೋಜನೆಗೆ ವಿಕಲ್ಪ್ ಎಂದು ಹೆಸರಿಡಲಾಗಿದ್ದು, ರಾಜಧಾನಿ, ಶತಾಬ್ದಿ, ದುರಂತೊ ಹಾಗೂ ಇನ್ನಿತರೆ ರೈಲುಗಳಲ್ಲಿ ಖಾಲಿ ಬರ್ತ್‍ಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

ಈ ಸೌಲಭ್ಯ ಪಡೆಯೋದು ಹೇಗೆ?: ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡುವಾಗ ವಿಕಲ್ಪ್ ಸ್ಕೀಮ್ ಆಯ್ಕೆ ಮಾಡಿಕೊಂಡರೆ, ಮುಂದಿನ ಬದಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯುವ ಬಗ್ಗೆ ಅವರ ಮೊಬೈಲ್‍ಗೆ ಒಂದು ಸಂದೇಶ ಬರುತ್ತದೆ. ಬದಲಿ ರೈಲಿನಲ್ಲಿ ಸೀಟ್ ಸಿಕ್ಕರೆ ಅವರ ಹೆಸರು ಟಿಕೆಟ್ ಬುಕ್ ಮಾಡಿದ ರೈಲಿನ ವೇಯ್ಟಿಂಗ್ ಲಿಸ್ಟ್ ಪಟ್ಟಿಯಲ್ಲಿ ತೋರಿಸುವುದಿಲ್ಲ. ಬದಲಿ ರೈಲಿಗೆ ವರ್ಗಾಯಿಸಲಾದ ಪ್ರಯಾಣಿಕರ ಹೆಸರುಗಳ ಪಟ್ಟಿಯನ್ನು ಕನ್ಫರ್ಮ್ ಲಿಸ್ಟ್ ಹಾಗೂ ವೇಯ್ಟಿಂಗ್ ಲಿಸ್ಟ್ ಪಟ್ಟಿಯ ಜೊತೆ ಅಂಟಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸ್ಕೀಮ್‍ನಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುವುದಿಲ್ಲ. ಹಾಗೂ ಟಿಕೆಟ್ ದರದಲ್ಲಿ ವ್ಯತ್ಯಾಸವಿದ್ದರೆ ಅದನ್ನು ಹಿಂದಿರುಗಿಸುವುದಿಲ್ಲ. ಈ ಸೌಲಭ್ಯ ಸದ್ಯಕ್ಕೆ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಲಭ್ಯವಿದ್ದು, ಸಾಫ್ಟ್ ವೇರ್ ಸಿದ್ಧವಾದ ನಂತರ ಕೌಂಟರ್‍ನಲ್ಲಿ ಟಿಕೆಟ್ ಪಡೆಯುವವರೂ ಈ ಸೌಲಭ್ಯ ಪಡೆಯಬಹುದಾಗಿದೆ.

ಅನೇಕ ಕಾರಣಗಳಿಗಾಗಿ ಪ್ರಯಾಣಿಕರು ಟಿಕೆಟ್ ರದ್ದು ಮಾಡಿದಾಗ ಹಣ ಹಿಂದಿರುಗಿಸಲು ರೈಲ್ವೆ ಇಲಾಖೆ ವರ್ಷಕ್ಕೆ ಸುಮಾರು 75 ಸಾವಿರ ರೂ. ವ್ಯಯಿಸುತ್ತಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *