ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

Public TV
1 Min Read

ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪಲಕೋಳೆಯ ಜನರಲ್ಲಿ ದೆವ್ವದ ಭಯ ಹೋಗಿಸಲು ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡುರವರು ಸ್ಮಶಾನದಲ್ಲೇ ಮಲಗಿದ್ದಾರೆ.

ಪಶ್ಚಿಮ ಗೋದಾವರಿಯ ಪಲಕೋಳೆ ಎಂಬಲ್ಲಿರುವ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ತೆಲಂಗಾಣ ಸರ್ಕಾರ 3 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಹೀಗಾಗಿ ಸ್ಮಶಾನದಲ್ಲಿ ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣ ಕಾರ್ಯವನ್ನು ಶಾಸಕ ನಾಯ್ಡುರವರು ಹಮ್ಮಿಕೊಂಡಿದ್ದರು. ಆದರೆ ಯಾವೊಬ್ಬ ಊರಿನವರು ಕಾಮಗಾರಿಗೆ ಬರಲು ಸಿದ್ಧರಿರಲಿಲ್ಲ. ರುದ್ರಭೂಮಿಯಲ್ಲಿ ದಿನನಿತ್ಯ ಹೆಣ ಸುಡುತ್ತಾರೆ, ಅಲ್ಲಿ ಭೂತ ಪ್ರೇತಗಳು ಇವೆ ಎಂಬ ಭಯದಿಂದ ದೂರ ಸರಿದಿದ್ದರು.

ಜನರಲ್ಲಿದ್ದ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡುರವರು ಸ್ಮಶಾನದಲ್ಲೇ ಮಲಗುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಜೂನ್ 22ರಿಂದ ಮೂರು ದಿನಗಳ ಕಾಲ ಸ್ಮಶಾನದಲ್ಲೇ ಫೋಲ್ಡಿಂಗ್ ಕಾಟ್ ಮತ್ತು ಸೊಳ್ಳೆ ಪರದೆ ಸಹಾಯದಿಂದ ಮಲಗಿದ್ದಾರೆ. ನಿರಂತರವಾಗಿ ಮೂರು ದಿನ ಸ್ಮಶಾನದಲ್ಲೇ ಬೀಡುಬಿಟ್ಟಿದ್ದ ಶಾಸಕರು ಜನರಿಗೆ, ಸ್ಮಶಾನದ ಒಳಗಾಗಲೀ ಅಥವಾ ಹೊರಗಾಗಲೀ ಯಾವುದೇ ಭೂತ-ಪ್ರೇತಗಳಿಲ್ಲ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕರ ಧೈರ್ಯಕ್ಕೆ ಮೆಚ್ಚಿದ ಊರಿನವರು, ಯಾವುದೇ ಭೂತ-ಪ್ರೇತಗಳು ಇಲ್ಲವೆಂದು ತಿಳಿದು, ಕಾಮಗಾರಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರು ಶಾಸಕ ನಿಮ್ಮಲ ರಾಮ ನಾಯ್ಡುರವರ ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *