ಮೇಕೆದಾಟು ಯೋಜನೆಗೆ ರಾಜ್ಯ ಸಂಪುಟ ಒಪ್ಪಿಗೆ: ತಮಿಳುನಾಡು ವಿರೋಧ

Public TV
1 Min Read

ನವದೆಹಲಿ: ಮೇಕೆದಾಟು ಯೋಜನೆಗೆ ಕರ್ನಾಟಕ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದ್ದನ್ನು ತಮಿಳುನಾಡು ವಿರೋಧಿಸಿದೆ.

ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಇಂದು ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ತಮಿಳುನಾಡಿನ ಕಾವೇರಿ ಸೆಲ್ ಚೇರ್ಮನ್ ಎಸ್.ಕೆ. ಪ್ರಭಾಕರನ್ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಅಂತಾ ಆತಂಕ ವ್ಯಕ್ತಪಡಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಕಾವೇರಿ ಮೆಲಸ್ತುವಾರಿ ಸಭೆಯಲ್ಲಿ ಇಂದು ಕಾವೇರಿ ನೀರು ಹಂಚಿಕೆಯ ಬಗ್ಗೆಯೂ ಮಾತುಕತೆ ನಡೆಯಿತು. ಸುಪ್ರೀಂ ಕೋರ್ಟ್‍ನ ಮಧ್ಯಂತರ ಆದೇಶವನ್ನು ಪಾಲಿಸಬೇಕು, ಬಾಕಿ ಉಳಿಸಿಕೊಂಡಿರುವ ನೀರನ್ನು ಬಿಡಬೇಕು ಅಂತಾ ವಾದಿಸಿತು. ಜೊತೆಗೆ ಮುಂದಿನ ಕಾವೇರಿ ವಿಚಾರಣೆ ಒಳಗೆ ಮತ್ತೊಂದು ಸಭೆ ಸೇರಲು ತೀರ್ಮಾನ ಕೈಗೊಳ್ಳಲಾಗಿದ್ದು ಬಿಕ್ಕಟ್ಟಿನ ಸಂದರ್ಭದಲ್ಲಿ ನೀರು ಹಂಚಿಕೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಜಲತಜ್ಞರ ಸಲಹೆ ಪಡೆಯಲು ಸಮಿತಿ ರಚನೆ ಮಾಡಲು ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಮರ್‍ಜಿತ್ ಸಿಂಗ್ ಒಪ್ಪಿಗೆ ಸೂಚಿಸಿದರು. ಈ ಹಿನ್ನಲೆಯಲ್ಲಿ ನಾಲ್ಕು ರಾಜ್ಯಗಳಿಗೂ ಆಯಾ ರಾಜ್ಯದ ಜಲ ತಜ್ಞರ ಹೆಸರು ಸೂಚಿಸುವಂತೆ ಸೂಚನೆ ನೀಡಿದ್ದು ಎಲ್ಲ ರಾಜ್ಯಗಳು ಹೆಸರು ಸೂಚಿಸಲು ಒಂದು ತಿಂಗಳ ಗಡುವು ನೀಡಲಾಗಿದೆ.

ಮುಖ್ಯವಾಗಿ ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧ ತಳ್ಳಿ ಹಾಕಿದ ಅಮರ್‍ಜಿತ್ ಸಿಂಗ್ ನೀವೂ ಮುಂಚಿತವಾಗಿ ವಿರೋಧಿಸುವುದು ಸರಿಯಲ್ಲ. ಕ್ಯಾಬಿನೆಟ್ ಒಪ್ಪಿಗೆ ಅಂತ್ಯವಲ್ಲ, ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಮತ್ತು ಜಲಸಂಪನ್ಮೂಲ ಇಲಾಖೆಯ ಒಪ್ಪಿಗೆ ಸಿಗಬೇಕಿದೆ ಅಂತಾ ತಮಿಳುನಾಡಿಗೆ ಬಿಸಿ ಮುಟ್ಟಿಸಿದ್ರು. ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಮತ್ತು ರಾಜ್ಯ ಜಲಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *