ಚಲಿಸುತ್ತಿರುವಾಗ್ಲೇ ಕಾರಿನಿಂದ ಪತ್ನಿಯನ್ನು ಹೊರದಬ್ಬಿದ ಎಂಜಿನಿಯರ್

Public TV
2 Min Read

ಚೆನ್ನೈ: ಚಲಿಸುತ್ತಿರುವಾಗಲೇ ಪತ್ನಿಯನ್ನು ಆಕೆಯ ಎಂಜಿನಿಯರ್ ಪತಿ ಹಾಗೂ ಸಂಬಂಧಿಕರು ಕಾರಿನಿಂದ ಹೊರದಬ್ಬಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

ಮಹಿಳೆ ಎಸ್‍ಯುವಿ ಕಾರಿನಿಂದ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಶೇರ್ ಆಗುತ್ತಿದ್ದಂತೆಯೇ ಮಹಿಳೆ, ತನ್ನ ಗಂಡ ಹಾಗೂ ಆತನ ಹೆತ್ತವರು ನನ್ನ ಕಾರಿನಿಂದ ದೂಡಿ ಹಾಕುವ ಮೂಲಕ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

38 ವರ್ಷದ ಆರತಿಯ ಪತಿ ಅರುಣ್ ಜುಡೆ ಅಮಲ್ ರಾಜ್ ಎಂಜಿನಿಯರ್ ಆಗಿದ್ದು, ಇವ್ವರಿಬ್ಬರ ಮಧ್ಯೆ ವೈಮನಸ್ಸು ಮೂಡಿತ್ತು. ಆದರೆ ಇತ್ತೀಚೆಗೆ ರಾಜಿ ಸಂಧಾನದ ಮೂಲಕ ಇಬ್ಬರು ಒಟ್ಟಿಗೆ ಆಗಿದ್ದರು. ತನ್ನ ಗಂಡ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆರತಿ ಆತನ ಜೊತೆಗೆ ಇರಲು ನಿರ್ಧರಿಸಿದ್ದರು.

ಆರತಿ ಹಾಗೂ ಅರುಣ್ 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದಾಗಿನಿಂದಲೂ ಇಬ್ಬರಲ್ಲೂ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಗಳು ನಡೆಯುತ್ತಲೇ ಇತ್ತು. ಹೀಗೆ 6 ವರ್ಷಗಳ ಬಳಿಕ ಇಬ್ಬರು ಮಕ್ಕಳೊಂದಿಗೆ ಆರತಿ ತನ್ನ ಪತಿಗೆ ವಿಚ್ಛೇದನ ನೀಡುವ ನಿರ್ಧಾರ ತೆಗೆದುಕೊಂಡರು. ಅಲ್ಲದೆ ಮುಂಬೈನಲ್ಲಿರುವ ತಮ್ಮ ಪೋಷಕರ ಜೊತೆ ಮಕ್ಕಳೊಂದಿಗೆ ವಾಸಿಸಲು 2014ರಲ್ಲಿ ತೀರ್ಮಾನಿಸಿದರು. ಆದರೆ ಈ ಎಲ್ಲಾ ಕೇಸ್ ಗಳು ಮುಂಬೈ ಕೋರ್ಟ್ ನಲ್ಲಿ ಇತ್ಯರ್ಥವಾಗದೇ ಉಳಿದಿವೆ. 5 ವರ್ಷ ಬೇರೆ ಬೇರೆಯಾಗಿದ್ದ ದಂಪತಿ ಕೊನೆಗೆ ರಾಜಿ ಸಂಧಾನದ ಮೂಲಕ ಜೊತೆಯಾಗಿ ಸಂಸಾರ ಮಾಡುವ ನಿರ್ಧಾರಕ್ಕೆ ಬಂದಿದ್ದರು.

ಹೀಗೆ ಮತ್ತೆ ಒಟ್ಟಾದ ಕುಟುಂಬ ಮೇ ತಿಂಗಳಲ್ಲಿ ರಜೆ ಅನುಭವಿಸಲು ಊಟಿಗೆ ತೆರಳಿದ್ದು, ಅಲ್ಲಿನ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಪತಿ ಅರುಣ್ ನತ್ತೆ ತನ್ನ ಹಳೆಯ ಚಾಳಿ ಆರಂಭಿಸಿದ್ದು, ಪತ್ನಿಯನ್ನು ನಿಂದಿಸಿದ್ದಾನೆ. ಅಲ್ಲದೆ ಆಕೆ ಮತ್ತು ಮಕ್ಕಳ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ. ಇದರಿಂದ ಮತ್ತೆ ಆಕ್ರೋಶಗೊಂಡ ಆರತಿ, ಊಟಿಯಲ್ಲೇ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಆಕೆಯನ್ನು ಸೇಫಾಗಿ ಮರಳಿ ಊರಿಗೆ ಕಳುಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಪೊಲೀಸರು ದಂಪತಿಯನ್ನು ಕರೆದು ಬುದ್ಧಿವಾದ ಹೇಳಿ ಆತನಿಂದ ಕ್ಷಮಾಪಣಾ ಪತ್ರವನ್ನು ಬರೆಸಿದ್ದಾರೆ.

ಇಷ್ಟೆಲ್ಲಾ ಆಗಿ ಮತ್ತೆ ರೆಸಾರ್ಟ್ ಗೆ ತೆರಳಿದ ದಂಪತಿ ಮಧ್ಯೆ ಮತ್ತೆ ಪತ್ರದ ಬಗ್ಗೆ ಜಗಳ ಆರಂಭವಾಗಿದೆ. ಅರುಣ್ ಊಟಿಗೆ ತನ್ನ ಪೋಷಕರನ್ನು ಕೂಡ ಕರೆದುಕೊಂಡು ಬಂದಿದ್ದನು. ಹೀಗಾಗಿ ಆಕೆಯಿಂದ ದೂರ ಇರುವಂತೆ ಅರುಣ್ ತನ್ನ ಪೋಷಕರಿಗೆ ತಿಳಿಸಿದ್ದಾನೆ.

ಈ ವಿಚಾರದ ಕುರಿತು ಆರತಿ ತನ್ನ ಪತಿ ಅರುಣ್ ನನ್ನು ಪ್ರಶ್ನಿಸಿದ್ದಾರೆ. ಈ ಘಟನೆ ಮನೆಗೆ ಕಾರಿನಲ್ಲಿ ಬರುತ್ತಿರುವಾಗ ಆರತಿ ಅಕ್ಕನ ಮನೆಯ ಸಮೀಪ ನಡೆದಿದೆ. ಪತ್ನಿ ಪ್ರಶ್ನೆಯಿಂದ ಕೆರಳಿದ ಪತಿ ಆಕೆಗೆ ಗುದ್ದಿದ್ದಾನೆ. ಅಲ್ಲದೆ ಕಾರಿನಿಂದ ಹೊರಗೆ ತಳ್ಳಿದ್ದಾನೆ. ಈ ದೃಶ್ಯ ರಸ್ತೆ ಬದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಿಂದ ಬಿದ್ದ ರಭಸಕ್ಕೆ ಆರತಿಯ ತಲೆ, ಭುಜ ಹಾಗೂ ಮೊಣಕಾಲಿಗೆ ಗಾಯಗಳಾಗಿವೆ.

ಸದ್ಯ ಆರತಿ ತನ್ನ ಹೆತ್ತವರೊಂದಿಗೆ ಮುಂಬೈನಲ್ಲಿ ನೆಲೆಸಿದ್ದು, ಪತಿ ಹಾಗೂ ಆತನ ಪೋಷಕರು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ನನಗೆ ಬೆದರಿಕೆ ಕೂಡ ಹಾಕಿದ್ದಾರೆ. ನನ್ನ ಮಗ ಅವರಿಗೆ ಟಾರ್ಗೆಟ್ ಆಗಿದ್ದಾನೆ. ಅವರು ಆತನ ಶಾಲೆಯ ಬಳಿ ಬರುತ್ತಿರುತ್ತಾರೆ. ಹೀಗಾಗಿ ಅವರಿಂದಾಗಿ ನನಗೆ ಜೀವನ ನಡೆಸಲು ಕಷ್ಟವಾಗುತ್ತದೆ. ಹೊರಗಡೆ ತೆರಳಲು ಭಯವಾಗುತ್ತದೆ. ಆದರೆ ಪೊಲೀಸರು ಅರುಣ್ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *