ತಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಹವಾ ಜೋರಾಗಿದೆ. ಪೆಡ್ಲರ್ ಪ್ರಸಾದ್ ಬಂಧನವಾದ ನಂತರ, ಆತ ಯಾರಿಗೆಲ್ಲ ಡ್ರಗ್ಸ್ ಸರಬರಾಜು ಮಾಡುತ್ತಿದ್ದೆ ಅಂತ ಬಾಯ್ಬಿಟ್ಟಿದ್ದ. ಪ್ರಸಾದ್ ಹೇಳಿಕೆಯನ್ನು ಗಂಭೀರವಾಗಿ ತಗೆದುಕೊಂಡಿದ್ದ ಚೆನ್ನೈ ಪೊಲೀಸರು, ನಟ ಶ್ರೀಕಾಂತ್ ಮನೆಯ ಮೇಲೆ ದಾಳಿ ಮಾಡಿದ್ದರು. ಶ್ರೀಕಾಂತ್ ರನ್ನು ವಿಚಾರಣೆ ಒಳಪಡಿಸಿದಾಗ ನಲವತ್ತಕ್ಕೂ ಹೆಚ್ಚು ಬಾರಿ ಡ್ರಗ್ಸ್ ಸೇವಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.
ವಿಚಾರಣೆಯ ನಂತರ ಪೊಲೀಸರು ಶ್ರೀಕಾಂತ್ ರನ್ನು ಬಂಧಿಸಿದ್ದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಶ್ರೀಕಾಂತ್ ಕೂಡ ಹಲವು ನಟರ ಹೆಸರುಗಳನ್ನು ಬಾಯ್ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಶ್ರೀಕಾಂತ್ ಬಂಧನದ ನಂತರ ನಟ ಕೃಷ್ಣರನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣ ಕೂಡ ಡ್ರಗ್ಸ್ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.
ತಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ ತೀವ್ರ ಸಂಚಲನವನ್ನೇ ಉಂಟು ಮಾಡಿದೆ. ಇನ್ನೂ ಕೆಲವು ನಟರು ಮತ್ತು ನಟಿಯರು ಹಾಗೂ ತಂತ್ರಜ್ಞರು ಈ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಚೆನ್ನೈ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.