ಕೇಂದ್ರ ಸಚಿವರ ಹೇಳಿಕೆಗೆ ವೇದಿಕೆಯಲ್ಲಿ ಗರಂ ಆದ ಕಾರ್ಮಿಕ ಸಚಿವ!

Public TV
1 Min Read

ಬಳ್ಳಾರಿ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಆರೋಪ ಪ್ರತ್ಯಾರೋಪ ಮಾಡೋದು ಮಾಮೂಲು, ಆದರೆ ಕೇಂದ್ರ ವಿಮಾನಯಾನ ಖಾತೆ ಸಚಿವರು ಮಾಡಿದ ಆರೋಪಕ್ಕೆ ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ಗರಂ ಆದ ಘಟನೆ ನಡೆದಿದೆ.

ಗುರುವಾರ ತೋರಣಗಲ್‍ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಟು ಹೈದರಾಬಾದ್ ವಿಮಾನಯಾನಕ್ಕೆ ಚಾಲನೆ ನೀಡಲಾಯಿತು. ಸಮಾರಂಭವನ್ನು ಉದ್ದೇಶಿಸಿ ಮಾತಾನಾಡಿದ ಕೇಂದ್ರ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ ಸಿನ್ಹಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ 75 ವರ್ಷದಲ್ಲಿ 70 ವಿಮಾನ ನಿಲ್ದಾಣ ಮಾಡಿದೆ. ಬಿಜೆಪಿ ಸರ್ಕಾರ ಒಂದೇ ವರ್ಷದಲ್ಲಿ ಕಡಿಮೆ ವೆಚ್ಚದಲ್ಲಿ 30 ನಿಲ್ದಾಣ ಸ್ಥಾಪನೆ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಸಚಿವರ ಈ ಆರೋಪಕ್ಕೆ ವೇದಿಕೆಯಲ್ಲಿ ಇದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಗರಂ ಆಗಿ, ಬಿಜೆಪಿ ನಾಯಕರು ಕಾಂಗ್ರೆಸ್ ಏನೂ ಮಾಡಿಲ್ಲ ಏನೂ ಮಾಡಿಲ್ಲ ಅಂತಾರೆ. ಅವರು ಹೇಳುವುದನ್ನು ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬರುತ್ತಿದೆ. ದೇಶದಲ್ಲಿ ಆಧಾರ್, ಜಿಎಸ್‍ಟಿ, ಐಟಿಬಿಟಿ, ರೈಲ್ವೆ, ಆರ್‍ಟಿಐ, ಮೊಬೈಲ್ ಎಲ್ಲವನ್ನೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಬಿಜೆಪಿ ನಾಯಕರಿಂದ ಇದೆಲ್ಲವನ್ನು ಬರೀ ನಾಲ್ಕು ವರ್ಷದಲ್ಲಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿ, ಕೇಂದ್ರ ಸಚಿವರಿಗೆ ವೇದಿಕೆಯಲ್ಲೆ ತಿರುಗೇಟು ನೀಡಿ ವೇದಿಕೆಯಿಂದ ಹೊರ ನಡೆದರು.

ಜಿಂದಾಲ್ ಆವರಣದಲ್ಲಿ ನಡೆದ ಸಮಾರಂಭ ಅಕ್ಷರಶಃ ಬಿಜೆಪಿ ಕಾಂಗ್ರೆಸ್ ನಾಯಕರ ಜಟಾಪಟಿಗೆ ಸಾಕ್ಷಿಯಾದಂತೆ ಕಂಡು ಬಂದಿತು.

Share This Article
Leave a Comment

Leave a Reply

Your email address will not be published. Required fields are marked *