ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

Public TV
2 Min Read

ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗೇಶ್ವರ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ಯೋಗೇಶ್ವರ್ ಮಾತನಾಡಿ ಡಿಕೆ ಸಹೋದರರ ವಿರುದ್ಧ  ಏಕವಚನದಲ್ಲಿ ಹರಿಹಾಯ್ದಿದ್ದಾರೆ.

ಸಚಿವ ಡಿ.ಕೆ ಶಿವಕುಮಾರ್‍ರವರದ್ದು ಇದು ರಾಜಕೀಯದ ಅಂತಿಮಘಟ್ಟ. ಆತನ ಇತಿಹಾಸ ಇಡೀ ರಾಜ್ಯಕ್ಕೆ ಗೊತ್ತಿದ್ದು ಡಿಕೆಶಿ ಒಂದು ನೆಗೆಟಿವ್ ಫೋರ್ಸ್. ಅವನಿಂದಲೇ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷರಾದರೆ, ಸಿಎಂ ಆದರೆ ಶಿವಕುಮಾರ್ ನನ್ನನ್ನು ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ ಅದು ಅವರ ಕನಸು, ಆ ಕನಸು ನನಸಾಗುವುದಿಲ್ಲ. ಈ ಹಿಂದೆ ಲೋಕಸಭಾ ಚುನಾವಣೆಯ ವೇಳೆ ನನ್ನ ಬಳಿ ಕೈ ಕಾಲು ಹಿಡಿದುಕೊಂಡು ಭಿಕ್ಷೆ ಬೇಡಲು ಬಂದಿದ್ದರು ಎಂದು ತಿಳಿಸಿದರು.

ಅಣ್ಣ-ತಮ್ಮಂದಿರಿಗೆ 25 ವರ್ಷಗಳಿಂದ ತೊಡೆತಟ್ಟಿಕೊಂಡೇ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಈಗಲೂ ಸಹ ತೊಡೆ ತಟ್ಟಿ ಚಾಲೆಂಜ್ ಮಾಡ್ತೇನೆ ಮುಂದಿನ ಎಂಪಿ, ಎಂಎಲ್‍ಸಿ ಚುನಾವಣೆಯನ್ನ ಗೆದ್ದು ತೋರಿಸಲಿ ಎಂದು ಹೇಳಿದರು.

ಮೋಸ ಹೋದ್ವಿ: ಶಾಸಕ ಸಿ.ಪಿ ಯೋಗೇಶ್ವರ್ ಅವರನ್ನು ನಂಬಿ ನಾವು ಮೋಸ ಹೋಗಿದ್ದೇವೆ. ಇನ್ನು ಮುಂದೆ ಹಾಗೆ ಆಗಲ್ಲ ಚನ್ನಪಟ್ಟಣದಲ್ಲಿ 2018 ಕ್ಕೆ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ತಿಳಿಸಿದರು.

ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ತೊರೆದ ಬಳಿಕ ಇಂಧನ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ದೊಡ್ಡಮಳೂರು ಸಮೀಪದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು. ಈ ವೇಳೆ ಡಿ.ಕೆ ಸಹೋದರರು ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧ ಗುಡುಗಿದರು.

ಈ ವೇಳೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಚನ್ನಪಟ್ಟಣ ಕ್ಷೇತ್ರಕ್ಕೆ ಶಾಸಕರಿಲ್ಲ, ನಾವೇ ಶಾಸಕರಾಗಿದ್ದೇವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನ ಜನ ಆಯ್ಕೆ ಮಾಡ್ತಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಯೋಗೇಶ್ವರ್‍ರವರೇ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಅವರು ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಲಿ, ದಳದವರಿಗೆ ಯೋಗೇಶ್ವರ್ ಬಗ್ಗೆ ಗೊತ್ತು ಅದಕ್ಕೆ ಹತ್ತಿರ ಸೇರಿಸಿಕೊಳ್ಳುತ್ತಿಲ್ಲ. ಇನ್ನೂ ಬಿಜೆಪಿಯವರಿಗೆ ಅನುಭವವಾಗಬೇಕಿದೆ ಎಂದರು.

ಮಾನ ಮರ್ಯಾದೆ ಇದ್ರೆ ಯೋಗೇಶ್ವರ್ ತಮ್ಮ ಸಹೋದರಿನಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಡಿಕೆಶಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *