ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

Public TV
2 Min Read

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರನ್ನು ಹದ್ದು ಬಸ್ತಿನಲ್ಲಿ ಇಡದಿದ್ದರೇ, ನಾನು ಹಾಗೂ ಸತೀಶ್ ಜಾರಕಿಹೊಳಿ ಸೇರಿಕೊಂಡು ಉಗ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಡಳಿತ ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಖಾರವಾಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2004 ರಿಂದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯಕ್ಕೆ ಬಂದಿದ್ದಾರೆ. ಮೊದಲು ಅವರೇನಾಗಿದ್ದರು, ಅವರ ಇತಿಹಾಸ ಏನು ಎಂಬುದನ್ನು ಮೊದಲು ಅರಿತುಕೊಳ್ಳಲಿ. ಹೆಬ್ಬಾಳ್ಕರ್ ರವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಸತೀಶ್ ಜಾರಕಿಹೊಳಿ. ನಾವು ಸಹಾಯ ಮಾಡಿದ್ದನ್ನು ಯಾರಿಗೂ ಹೇಳಬಾರದು ಎಂದು ಅಂದುಕೊಂಡಿದ್ದೆವು. ಆದರೆ ಈಗ ಅನಿವಾರ್ಯವಾಗಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ್ಕರ್ ತಂದೆಯು ಅನಾರೋಗ್ಯಕ್ಕೆ ತುತ್ತಾದಾಗ ನಾನೇ ಧನ ಸಹಾಯ ಮಾಡಿದ್ದೆ, ಅವರ ಮಗ ಹಾಗೂ ಸಹೋದರನ ವಿಷಯದಲ್ಲೂ ಸಹಾಯ ಮಾಡಿದ್ದೆ. ಆದರೆ ಇಂದು ಅವರು ಕೀಳು ಮಟ್ಟಕ್ಕೆ ಇಳಿದು ಪ್ರಚಾರ ಮಾಡುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಇನ್ನು ಮುಂದೆ ಹೆಬ್ಬಾಳ್ಕರ್ ಬಗ್ಗೆ ನಾವು ಮಾತನಾಡಲ್ಲ. ಹೆಬ್ಬಾಳ್ಕರ್ ನಮಗೆ ಸಾಲ ಕೊಟ್ಟಿದ್ದಾರೆ ಎಂಬುದು ಕೇವಲ ಊಹಾಪೋಹ. ಅವರಿಗೆ ದೆಹಲಿ ತೋರಿಸಿದ್ದು ನಾನು. ಡಿಕೆಶಿ ನಾವು ಇಬ್ಬರು ಗೆಳೆಯರು, 2004 ರಲ್ಲಿ ನಾವು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದೆವು. ಅವರೂ ಸಹ ನನಗೆ ಸಚಿವರಾಗಲು ಸಹಾಯ ಮಾಡಿದ್ದರು. ಕೊಲ್ಹಾಪುರದ ಮಹಾಲಕ್ಷ್ಮೀ ದೇವರ ಆಣೆ ಮಾಡಲೂ ಸಹ ನಾನು ಸಿದ್ದ. ಇನ್ನುಮುಂದೆ ಲಕ್ಷ್ಮೀ ಹೆಬ್ಬಾಳ್ಕರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೇ, ನಾನು ಹಾಗೂ ಸತೀಶ್ ಜಾರಕಿಹೊಳಿ ಉಗ್ರ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಬಹುಮತ ಮಾಡೋದು ದೊಡ್ಡದಲ್ಲ. ಆದರೆ ಏನಾದರೂ ಮಾಡಿದರೆ ಜಾರಕಿಹೊಳಿ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಚುನಾವಣಾ ವಿಚಾರದಲ್ಲಿ ಹಣಕಾಸಿನ ವ್ಯವಹಾರ ನಡೆದಿದೆ. ಸತೀಶ್ ಜಾರಕಿಹೊಳಿ ಅಪಮಾನ ಆದರೆ, ನಾನು ಅವರ ಜೊತೆಗೆ ಇರುತ್ತೇನೆ. ಅವರ ನಿರ್ಣಯಕ್ಕೆ ನಾನೂ ಬದ್ಧ. ಅಲ್ಲದೇ ಬೆಳಗಾವಿ ತಾಲೂಕಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ಆರೋಪ ಕುರಿತು ಈಗಾಗಲೇ ಸಭೆ ಕರೆದು ಮಾತನಾಡಿದ್ದೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *