ತಿ. ನರಸೀಪುರ ತಹಸೀಲ್ದಾರ್ ನೇಣಿಗೆ ಶರಣು

Public TV
1 Min Read

ಮೈಸೂರು: ತಿ.ನರಸೀಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ್ ಬಿ.ಶಂಕರಯ್ಯ(50) ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿ.ನರಸೀಪುರ ಪಟ್ಟಣದಲ್ಲಿರುವ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂದೆ ಪಾಂಡವಪುರ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ಶಂಕರಯ್ಯ ಕಳೆದ ಒಂದು ವರ್ಷದಿಂದ ತಿ.ನರಸೀಪುರ ತಾಲೂಕಿಗೆ ವರ್ಗಾವಣೆಯಾಗಿದ್ದರು.

ವಸತಿ ಗೃಹದಲ್ಲಿ ಸಕಲ ಸೌಕರ್ಯಗಳಿದ್ದರೂ ಕುಟುಂಬದವರನ್ನು ಕರೆ ತಂದಿರಲಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವಸತಿ ಗೃಹದಲ್ಲಿ ವಾಸವಿರುತ್ತಿದ್ದ ಶಂಕರಯ್ಯ ಸಾಮಾನ್ಯವಾಗಿ ಮಂಡ್ಯದಲ್ಲಿರುವ ನಿವಾಸದಿಂದಲೇ ಬಂದು ಹೋಗುತ್ತಿದ್ದರು.

ಶಂಕರಯ್ಯ ಹಾಗೂ ಪುಷ್ಪಲತಾ ಅಂತರ್ಜಾತಿ ವಿವಾಹವಾಗಿದ್ದು ಸಂಸಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಶಂಕರಯ್ಯ ಪತ್ನಿ ಪುಷ್ಪಲತಾ ವಕೀಲ ವೃತ್ತಿಯಲ್ಲಿದ್ದಾರೆ. ಮೊದಲ ಪುತ್ರ ಸುಮನ್ ಎಂಜಿನಿಯರ್ ಓದಿದ್ದರೆ, ಎರಡನೇ ಪುತ್ರ ನಂದೀಶ್ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪುತ್ರಿ ನಂದಿನಿಗೆ ಮದುವೆ ಫಿಕ್ಸ್ ಆಗಿತ್ತು.

ಶಂಕರಯ್ಯ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಶವದ ಮರಣೋತ್ತರ ಪರೀಕ್ಷೆಯ ಫಲಿತಾಂಶ ಲಭ್ಯವಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *