ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸರ್ಕಾರದ ಹತ್ಯಾಕಾಂಡ: ಶರವಣ

Public TV
2 Min Read

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸರ್ಕಾರದಿಂದ ಆದ ಹತ್ಯಾಕಾಂಡ. ಇದಕ್ಕೆ ಸರ್ಕಾರವೇ ಹೊಣೆ. ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ MLC ಶರವಣ (T.A.Sharavana) ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಕುಸಿದಿದೆ. ಅರಾಜಕತೆ ತಾಂಡವ ಆಡ್ತಿದೆ. ಯಾವ ರೀತಿ ಆಡಳಿತ ನಡೆಯುತ್ತಿದೆ ಅಂತ ಚಿನ್ನಸ್ವಾಮಿ ಘಟನೆಯಿಂದ ಗೊತ್ತಾಗಿದೆ. 11 ಜನರ ಸಾವಾಗಿದೆ. ಅಷ್ಟು ಬೇಗ ಯಾಕೆ ಕಾರ್ಯಕ್ರಮ ಮಾಡಬೇಕಿತ್ತು. ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗಲೂ ಸಮಯ ತಗೊಂಡು ಕಾರ್ಯಕ್ರಮ ಮಾಡಿದ್ರು. ಸಿಎಂ, ಡಿಸಿಎಂ, ಗೃಹ ಸಚಿವರು ಇದಕ್ಕೆ ಹೊಣೆ. ಡಿಸಿಎಂ ಡಿಕೆ ಶಿವಕುಮಾರ್ ಜನರಿಗೆ ಆಹ್ವಾನ ಮಾಡಿದ್ರು. ಯಾಕೆ ಆಹ್ವಾನ ಕೊಟ್ರಿ. ವಿಧಾನಸೌಧದಲ್ಲಿ ಕಾರ್ಯಕ್ರಮ ಬೇಡ ಅಂತ ಪೊಲೀಸರು ಪತ್ರ ಬರೆದಿದ್ದರು. ಯಾಕೆ ಕಾರ್ಯಕ್ರಮ ಮಾಡಿದ್ರಿ. ಜನಕ್ಕೆ ಬನ್ನಿ ಅಂದ್ರಿ, ಕಪ್‌ಗೆ ಮುತ್ತು ಕೊಟ್ಟವರು ಡಿಕೆಶಿ. ಪರಮೇಶ್ವರ್ ಅನುಭವ ಇರೋ ಮಂತ್ರಿ. ನಿಮಗೂ ಮಾಹಿತಿ ಇಲ್ಲ ಅಂತೀರಾ. ಹಾಗಾದ್ರೆ ನೀವು ಈ ಜಾಗದಲ್ಲಿ ಇರೋದಕ್ಕೆ ಏನು ನೈತಿಕತೆ ಇದೆ. ಸಿಎಂ ವೈಫಲ್ಯ ಅಂತ ಒಪ್ಪಿದ್ದಾರೆ. ಅವರು ಕೂಡ ರಾಜೀನಾಮೆ ಕೊಡಬೇಕು ಎಂದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ತನಿಖಾ ಆಯೋಗದ ಮುಂದೆ ಮಾಹಿತಿ ಕೊಡ್ತೀವಿ – ಪರಮೇಶ್ವರ್

ಡಿಸಿಎಂ ಅವರು ಜನರು ಸತ್ತಿದ್ದಾರೆ ಅಂತ ಗೊತ್ತಿದ್ದರೂ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ರು. ಹತ್ಯಾಕಾಂಡ ಈ ರಾಜ್ಯದಲ್ಲಿ ನಡೆದಿದೆ. ಇದಕ್ಕೆ ಸರ್ಕಾರ ಹೊಣೆ. 25 ಲಕ್ಷ ಕೊಟ್ಟರೂ ಸತ್ತವರು ವಾಪಸ್ ಬರೊಲ್ಲ. ಇದನ್ನ ಪ್ರಶ್ನೆ ಮಾಡಿದ್ರೆ ಕುಂಭಮೇಳದ ಬಗ್ಗೆ ಮಾತಾಡ್ತಾರೆ ಕಾಂಗ್ರೆಸ್‌ನವರು. ನಮ್ಮ ರಾಜ್ಯದಲ್ಲಿ ಇಂತಹ ದುರಾಡಳಿತ ನಡೆಯುತ್ತಿದೆ‌. ಕರ್ನಾಟಕದ ಇತಿಹಾಸದಲ್ಲಿ ಇದು ಮರೆಯಲಾಗದ ಘಟನೆ. ಕಾಂಗ್ರೆಸ್ ಹೈಕಮಾಂಡ್ ಇದರ ಬಗ್ಗೆ ಮಾತಾಡಬೇಕು. ರಾಹುಲ್ ಗಾಂಧಿ ಈ ಬಗ್ಗೆ ಮಾತಾಡಬೇಕು. ರಾಜ್ಯದಲ್ಲಿ ಸರ್ಕಾರದ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಸಿಎಂ ಹಿಡಿತದಲ್ಲಿ ಆಡಳಿತ ವ್ಯವಸ್ಥೆ ‌ಇಲ್ಲ. ಎರಡು ಬಾರಿ ಸಿಎಂ ಆದವರಿಂದ ಆಡಳಿತ ನಿಯಂತ್ರಣ ತಪ್ಪಿದೆ. ನಿಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ ಅಂದರೆ ಈ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ಮಾಡಲು ಆಗದೇ ಹೋದ್ರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಕಿಡಿಕಾರಿದರು.

ಸರ್ಕಾರ ಅನುಮತಿ ಕೊಟ್ಟಿಲ್ಲ ಅಂದರೆ ಡಿಸಿಎಂ ಡಿಕೆ ಶಿವಕುಮಾರ್ ಯಾಕೆ ಹೋದ್ರು. ಕಪ್‌ಗೆ ಮುತ್ತು ಕೊಟ್ರು. ಮಕ್ಕಳು, ಮೊಮ್ಮಕ್ಕಳನ್ನ ಯಾಕೆ ಕರೆದುಕೊಂಡು ಹೋಗಿದ್ರಿ. ಇದು ವಿಜಯೋತ್ಸವ ಅಲ್ಲ. ಮರಣೋತ್ಸವ ಆಗಿದೆ. ನಾವೆಲ್ಲರು ತಲೆ ತಗ್ಗಿಸೋ ಕೆಲಸ ಆಗಿದೆ. ಸತ್ತವರ ಕುಟುಂಬ ನೋವು ಗೊತ್ತಿದೆಯಾ? ಕುನ್ಹಾ ನೇತೃತ್ವದ ತನಿಖೆ ಆಗ್ತಿದೆ, ಆಗಲಿ. ಪ್ರಾಮಾಣಿಕ ಅಧಿಕಾರಿಗಳನ್ನ ಅಮಾನತು ಮಾಡಿದ್ದೀರಾ? ಯಾಕೆ ಅಮಾನತು ಮಾಡಿದ್ರಿ? ತೆಲಂಗಾಣದಲ್ಲಿ ಅಲ್ಲು ಅರ್ಜುನ್‌ರನ್ನ ಬಂಧನ ಮಾಡ್ತಾರೆ. ನಮ್ಮಲ್ಲಿ ಯಾಕೆ ಇದು ಆಗಲಿಲ್ಲ. ನಿಮಗೆ ಶಿಕ್ಷೆ ಇಲ್ಲವಾ? ಸಿದ್ದರಾಮಯ್ಯ ಅವರು ನನಗೇನು ಗೊತ್ತಿಲ್ಲ ಅಂತ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಈ ಸರ್ಕಾರ ಈ ರಾಜ್ಯವನ್ನು ಬಿಟ್ಟು ಹೋಗಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಜನರು ಇದನ್ನೇ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದು ನೀಚ ಸರ್ಕಾರ. ನೀವು ಮಾಡಿದ ತಪ್ಪಿಗೆ ಬಲಿಯಾಗಬೇಕು. ಕಾಂಗ್ರೆಸ್ ಹೈಕಮಾಂಡ್ ಯಾರನ್ನ ಬಲಿ ಕೊಡುತ್ತದೆಯೋ ನೋಡೋಣ ಎಂದರು. ಇದನ್ನೂ ಓದಿ: ನೀವು ರಾಜ್ಯದ ಮುಖ್ಯಮಂತ್ರಿಗಳೋ or ವಿಧಾನಸೌಧ ಮೆಟ್ಟಿಲುಗಳ ಮುಖ್ಯಮಂತ್ರಿಗಳೋ: ಸಿದ್ದರಾಮಯ್ಯಗೆ ಹೆಚ್‌ಡಿಕೆ ಟಾಂಗ್‌

Share This Article