ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ

Public TV
1 Min Read

-ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ

ಉಡುಪಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯೇ ರಾಜ್ಯಕ್ಕೆ ಫಸ್ಟ್ ಬಂದಿದೆ. ನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ  ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದಿರುವ ಸ್ವಾತಿ, ನಗರದ ಅಂಬಾಗಿಲು ನಿವಾಸಿ ಉದಯಶಂಕರ್ -ಗಿರಿಜಾ ದಂಪತಿಯ ಪುತ್ರಿಯಾಗಿದ್ದಾರೆ. ಇದೀಗ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾತಿ, ತನ್ನ ಖುಷಿ ಹಂಚಿಕೊಂಡಿದ್ದಾರೆ.

ನನಗೆ ಮೊದಲಿಗೆ ನಂಬಲು ಸಾಧ್ಯವಾಗಿಲ್ಲ. ಆದರೂ ನಾನು ಇದಕ್ಕಿಂತ ಹೆಚ್ಚಿನ ಅಂಕ ಬರುತ್ತದೆ ಅಂದುಕೊಂಡಿದ್ದೆ. ಪೋಷಕರು ಹಾಗೂ ಅಕ್ಕನ ಸಪೋರ್ಟ್ ಇತ್ತು. ಜೊತೆ ನಮ್ಮ ಶಿಕ್ಷಕರ ಮಾರ್ಗದರ್ಶನವೂ ಇತ್ತು. ನಾನು ತುಂಬಾ ಹಾರ್ಡ್ ವರ್ಕ್ ಮಾಡಿದ್ದೇನೆ. ಹೀಗಾಗಿ ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಇದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ರು.

ಪ್ರತಿದಿನ ಮಾಡಿದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಮುಂದೆ ಎಂಜಿನಿಯರಿಂಗ್ ಮಾಡಬೇಕು ಎಂದುಕೊಂಡಿದ್ದೇನೆ. ಅದಕ್ಕೆ ಸಿಇಟಿ ಪರೀಕ್ಷೆ ಬರೆಯಬೇಕು. ಅದಕ್ಕೂ ಈಗಿನಿಂದಲೇ ರೆಡಿಯಾಗುತ್ತಿದ್ದೇನೆ. ಎಂಜಿನಿಯರ್ ಕಾಲೇಜಿನಲ್ಲಿ ಸೀಟ್ ತೆಗೆದುಕೊಳ್ಳುತ್ತೇನೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಅಂದು ಮಾಡಿದ ಪಾಠವನ್ನು ಅಂದೇ ಓದಿಕೊಳ್ಳಿ, ನಿರ್ಲಕ್ಷ್ಯ ಮಾಡಬೇಡಿ. ಪರೀಕ್ಷೆಯ ಹಿಂದಿನ ದಿನ ವ್ಯಾಸಂಗ ಮಾಡಿದರೂ ಒಳ್ಳೆಯ ಅಂಕ ಪಡೆದುಕೊಳ್ಳಬಹುದು. ಆದರೆ ಮೊದಲೇ ಅಭ್ಯಾಸ ಮಾಡಿಕೊಂಡರೆ ಭವಿಷ್ಯಕ್ಕೆ ಒಳ್ಳೆದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ರು.

ಅವಳು ನಿದ್ದೆ ಏನು ಬಿಡಲಿಲ್ಲ. ಪ್ರತಿದಿನ ಓದಿಕೊಳ್ಳುತ್ತಿದ್ದಳು. ಶಿಕ್ಷಕರ ಬೆಂಬಲ ಕೂಡ ಇತ್ತು. ಹೀಗಾಗಿ ಅವಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ನಮಗೆ ತುಂಬಾ ಸಂತೋಷವಾಗಿದೆ. ಎಲ್ಲವೂ ನಮ್ಮ ಕುಲದೇವರ ಮಹಿಮೆಯಾಗಿದೆ ಎಂದು ಸ್ವಾತಿ ಅವರು ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *