ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣ: 6 ವರ್ಷಗಳ ಬಳಿಕ ಸ್ವಾಮಿ ಅಸೀಮಾನಂದ ಬಿಡುಗಡೆ

Public TV
1 Min Read

ಹೈದರಾಬಾದ್: ಮೂರು ಬಾಂಬ್ ಸ್ಫೋಟಕ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಅಡಿ ಆರು ವರ್ಷಗಳ ಹಿಂದೆ ಬಂಧಿತರಾಗಿದ್ದ ಸ್ವಾಮಿ ಅಸೀಮಾನಂದ ಅವರು ಶುಕ್ರವಾರ ಹೈದರಾಬಾದ್‍ನ ಜೈಲಿನಿಂದ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ.

2007ರ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತರಾಗಿದ್ದ ಸ್ವಾಮೀ ಅಸೀಮಾನಂದ ಅವರಿಗೆ ಹೈದರಾಬಾದ್ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಈ ಮೂಲಕ ಸತತ 6 ವರ್ಷಗಳ ಕಾಲ ಜೈಲುವಾಸಿಯಾಗಿದ್ದ ಸ್ವಾಮೀ ಅಸೀಮಾನಂದಗೆ ಇಂದು ಬಿಡುಗಡೆ ಸಿಕ್ಕಿದೆ. ಆದ್ರೆ ತನ್ನ ಅನುಮತಿ ಇಲ್ಲದೇ ಹೈದರಾಬಾದ್ ನಗರದದಿಂದ ಹೊರಗಡೆ ತೆರಳದಂತೆ ಕೋರ್ಟ್ ಷರತ್ತು ವಿಧಿಸಿದೆ.

ಪ್ರಕರಣದ ಇನ್ನೋರ್ವ ಆರೋಪಿ ಭರತ್ ಮೋಹನ್‍ಲಾಲ್ ರತೆಶ್ವರ್ ಅಲಿಯಾಸ್ ಭರತ್ ಬಾಯ್ ಗೂ ಕೂಡ ಕೋರ್ಟ್ ಜಾಮೀನು ನೀಡಿದೆ.

ಸ್ವಾಮಿ ಅಸೀಮಾನಂದ ಅವರ ನೈಜ ಹೆಸರು ನಬಾ ಕುಮಾರ್ ಸರ್ಕಾರ್ ಆಗಿದ್ದು, 2007 ರ ಮೇ 18ರಂದು ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ 2010ರ ನವೆಂಬರ್ 10ರಂದು ಹರದ್ವಾರದಲಿ ಬಂಧಿಸಲಾಗಿತ್ತು. ಬಾಂಬ್ ಸ್ಫೋಟ ಪ್ರಕರಣದಲ್ಲಿ 9 ಮಂದಿ ಸಾವನ್ನಪ್ಪಿದ್ದರು.

ಮಾರ್ಚ್ 8ರಂದು ಎನ್‍ಐಎ ವಿಶೇಷ ನ್ಯಾಯಾಲಯ 2007 ರಲ್ಲಿ ನಡೆದಿದ್ದ ಅಜ್ಮೀರ್ ದರ್ಗಾದಲ್ಲಿನ ಸ್ಫೋಟ ಪ್ರಕರಣದ ತೀರ್ಪನ್ನು ಪ್ರಕಟಿಸಿತ್ತು. ಆರೋಪಿಯಾಗಿದ್ದ ಸ್ವಾಮಿ ಅಸೀಮಾನಂದ ಅವರನ್ನು ಕೋರ್ಟ್ ಖುಲಾಸೆಗೊಳಿಸಿ ಸುನಿಲ್ ಜೋಷಿ(ಮೃತ), ದೇವೇಂದ್ರ ಗುಪ್ತ, ಭವೇಶ್ ಪಟೇಲ್ ಅವರನ್ನು ಅಪರಾಧಿಗಳೆಂದು ತೀರ್ಪು ನೀಡಿತ್ತು. 2007ರ ಸಂಜೌತ ಎಕ್ಸ್‍ಪ್ರೆಸ್ ಸ್ಫೋಟ ಪ್ರಕರಣದಲ್ಲೂ ಅಸೀಮಾನಂದಗೆ ಅಂಬಲಾ ಕೋರ್ಟ್ ಜಾಮೀನು ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *