ಶಾಲಾ ಬಾಲಕನ ಅನುಮಾನಾಸ್ಪದ ಸಾವು – ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Public TV
1 Min Read

ಮಡಿಕೇರಿ: ಶಾಲಾ ಬಾಲಕನೊಬ್ಬ ಅನುಮಾನಾಸ್ಪದವಾಗಿ ನೇಣು ಬಿಗಿದ ಸಾವನ್ನಪ್ಪಿದ ಘಟನೆ ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬೆಂಡೆಬೆಟ್ಟ ಹಾಡಿಯಲ್ಲಿ ನಡೆದಿದೆ.

ಗುಮ್ಮನಕೊಲ್ಲಿ ರಸ್ತೆಯ ಮೂಕಾಂಬಿಕ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ್ (15) ಮೃತ ಬಾಲಕ. ಪೋಷಕರಿಲ್ಲದ ಈತ ಕಳೆದ 5 ವರ್ಷದಿಂದ ಅಜ್ಜ, ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ. ಗುರುವಾರ ವಾಸದ ಮನೆಯಲ್ಲಿ ವೇಲ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಆದರೆ ಈತನ ಸಾವಿನ ಬಗ್ಗೆ ಸಂಬಂಧಿಕರು ಹಾಗೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಬಾಲಕನ ಅಜ್ಜ, ಅಜ್ಜಿ ಈತನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮೃತ ಬಾಲಕನ ಮೈಮೇಲೆ ಹಲ್ಲೆ ನಡೆಸಿದ ಗುರುತುಗಳಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ ಅಂತ ಒತ್ತಾಯಿಸಿದ್ದಾರೆ. ಈ ಸಂಬಂಧ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಮುಂದೆ ಬಾಲಕನ ಅಜ್ಜ, ಅಜ್ಜಿ ವಿರುದ್ಧ ಸಂಬಂಧಿಕರು ಹರಿಹಾಯ್ದಿದ್ದು, ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆ ರೈಲು ಹರಿದು ಮೂವರು ಸಾವು

ಬಾಲಕನ ಅಜ್ಜ ಚಂದ್ರಶೇಖರ್ ಹೇಳಿಕೆಯಂತೆ ಬಾಲಕ ಮಂಜುನಾಥ್ ನಶೆಯ ಪದಾರ್ಥ ತೆಗೆದುಕೊಳ್ಳುವ ಚಟ ಅಂಟಿಸಿಕೊಂಡಿದ್ದ. ಈ ಬಗ್ಗೆ ಹಲವು ಬಾರಿ ಬುದ್ದಿವಾದ ಹೇಳಿ ಗದರಿಸಲಾಗಿತ್ತು. ಗುರುವಾರ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಮಂಜೂರಾಗಿದ್ದರೂ ಕಾರಾಗೃಹದಲ್ಲಿ ಕೈದಿ ನೇಣಿಗೆ ಶರಣು

ಈ ನಡುವೆ ಬಾಲಕ ಸಾಯುವ ಮುನ್ನ ತನ್ನ ಸ್ನೇಹಿತರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಳಿಸಿದ ವಾಯ್ಸ್ ಮೆಸೇಜ್ ಹರಿದಾಡುತ್ತಿದ್ದು, ಮೃತನ ಅತ್ತೆ ಭಾಗ್ಯ ನೀಡಿದ ದೂರಿನ ಮೇರೆಗೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಮಡಿಕೇರಿಗೆ ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *