ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

Public TV
1 Min Read

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಇಂದು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತವನ್ನು ವೀಕ್ಷಿಸಿ ಅಲ್ಲಿನ ಕುಂದು ಕೊರತೆಯನ್ನು ಪರಿಶೀಲಿಸಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭರಚುಕ್ಕಿ ಜಲಪಾತೋತ್ಸವ ನಡೆಸುವ ಬಗ್ಗೆ ಚಿಂತಿಸಿದ್ದಾರೆ.

ಈ ಹಿಂದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಭರಚುಕ್ಕಿ ಉತ್ಸವ ನಡೆಸಲು ಪ್ರವಾಸಿಗರು, ಸ್ಥಳೀಯರು ಆಗ್ರಹಿಸಿದ್ದರು. ಹೀಗಾಗಿ ಜನರ ಆಗ್ರಹದ ಬೆನ್ನಲ್ಲೇ ಸಚಿವರು ಬೆಳ್ಳಂಬೆಳಗ್ಗೆ ಜಲಪಾತ ವೀಕ್ಷಣೆ ಆಗಮಿಸಿದ್ದರು. ಕಳೆದ 3 ತಿಂಗಳಿಂದ ದುಮ್ಮಿಕ್ಕಿ ಹರಿಯುತ್ತಿರೋ ಭರಚುಕ್ಕಿ ಜಲಪಾತದ ನೀರಿನ ಪ್ರಮಾಣವನ್ನು ಸಚಿವರು ವೀಕ್ಷಿಸಿದರು. ಹಾಗೆಯೇ ಅಲ್ಲಿನ ಕುಂದು ಕೊರತೆ ಬಗ್ಗೆ ಪರಿಶಿಲನೆ ನಡೆಸಿ, ಮಾಹಿತಿ ಪಡೆದರು.

ಜೊತೆಗೆ ಭರಚುಕ್ಕಿ ಜಲಪಾತೋತ್ಸವ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಜಲಪಾತೋತ್ಸವ ನಡೆಸುವಂತೆ ಸಚಿವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್ ಅವರು, ಬಿಜೆಪಿ ಸರ್ಕಾರಕ್ಕೆ ನೂರು ದಿನ, ಆದರೆ ಸಾಧನೆ ಶೂನ್ಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಕೇವಲ ಸಿಟ್ಟು, ಸೇಡು, ಕಹಿ ಭಾವನೆಗಳೇ ತುಂಬಿರುವವರಿಂದ ನೈಜ ಮೌಲ್ಯ ಮಾಪನ ಅಸಾಧ್ಯ ಎಂದು ವಿಪಕ್ಷ ನಾಯಕನ ವಿರುದ್ಧ ಹರಿಹಾಯ್ದರು.

100 ದಿನಗಳ ಆಡಳಿತದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ವಿಶೇಷವಾಗಿ ನೆರೆ ಮತ್ತು ಮಳೆ ನಮಗೆ ದೊಡ್ಡ ಸವಾಲಾಗಿತ್ತು. ನೆರೆಸಂತ್ರಸ್ತರಿಗೆ ನೆರವಾಗಲು ಸಾಕಷ್ಟು ಶ್ರಮಿಸಿದ್ದೇವೆ. ನಮಗೆ ಕೊಟ್ಟಿರುವ ಖಾತೆಗಳಲ್ಲಿ ಸಾಕಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ. ನಾವು ಏನೋ ಒಂದು ಸಾಧಿಸಿದ್ದೇವೆ ಎನ್ನುವುದಕ್ಕಿಂತ ಮುಂದಿನ ದಿನಗಳ ಸಾಧನೆಗೆ ಇದು ಸ್ಪೂರ್ತಿ ಕೊಟ್ಟಿರುವ ಅವಧಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *